ವಿಜಯಸಾಕ್ಷಿ ಸುದ್ದಿ, ಮುಳಗುಂದ : ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಪೌಷ್ಟಿಕಯುಕ್ತ ಆಹಾರ ಅಗತ್ಯ. ಉತ್ತರ ಕರ್ನಾಟಕ ರೊಟ್ಟಿ, ರಟ್ಟಿ ಬಲು ಗಟ್ಟಿ ಎಂದು ಉದ್ಯಮಿ ಸಂದೀಪ ಭಂಡಾರಿ ಹೇಳಿದರು.
ಅವರು ಪಟ್ಟಣದ ಸಮರ್ಥ ಉತ್ತರ ಕರ್ನಾಟಕ ರೊಟ್ಟಿ ಕೇಂದ್ರದ 5ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಆಹಾರ ಪದ್ಧತಿಗಳು ಬದಲಾವಣೆಯಾಗುತ್ತಿದ್ದು, ನಮ್ಮ ಪೂರ್ವಜರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ತಮ್ಮ ಮುಖ್ಯ ಆಹಾರ ಪದಾರ್ಥಗಳನ್ನು ಬೆಳೆಯುವುದರ ಜೊತೆಯಲ್ಲಿ ಅವುಗಳ ಬಳಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು. ಇಂದು ನಾವೆಲ್ಲರೂ ಹಣದ ಹಿಂದೆ ಬಿದ್ದು ನಮ್ಮ ಆಹಾರ ಪದ್ಧತಿಯನ್ನು ಮರೆತು ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಡಾ. ಎಸ್.ಸಿ. ಚವಡಿ ಮಾತನಾಡಿ, ನಮ್ಮ ಉತ್ತರ ಕರ್ನಾಟಕದ ಮುಖ್ಯ ಆಹಾರ ರೊಟ್ಟಿಯಾಗಿದ್ದು, ಇಂದು ನಮ್ಮ ಕೆಲಸದ ಒತ್ತಡದಲ್ಲಿ ನಮ್ಮ ಆರೋಗ್ಯ, ನಮ್ಮ ಆಹಾರ ಪದ್ಧತಿಗಳನ್ನು ಮರೆತು ತಿಂಡಿ ತಿನಿಸುಗಳಿಗೆ ಮಾರುಹೋಗಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಉತ್ತರ ಕರ್ನಾಟಕದ ಆಹಾರ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ಸಮರ್ಥ ಉತ್ತರ ಕರ್ನಾಟಕ ಆಹಾರ ಕೇಂದ್ರದ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆಯನ್ನು ಗೌರಮ್ಮಾ ಬಡ್ನಿ ವಹಿಸಿದ್ದರು. ಪ.ಪಂ ಸದಸ್ಯ ಎಸ್.ಸಿ. ಬಡ್ನಿ, ಮಂಗಳಾ ನೀಲಗುಂದ, ರಾಜೇಶ್ವರಿ ಬಡ್ನಿ, ಶಿವಬಸವ ಹಸಬಿ, ಈರಯ್ಯ ಹಿರೇಮಠ, ಎಸ್.ಎಂ. ಉಜ್ಜಣ್ಣವರ, ಗಣೇಶ ವಂಟಕರ್, ಮಾಹಾಂತೇಶ ನಪೂರಿಮಠ, ಶರಣಪ್ಪ ಬಾಳಿಕಾಯಿ, ಮಂಜುನಾಥ ಮಟ್ಟಿ, ನೀಲಕಂಠಯ್ಯ ಗವಿಮಠ ಇದ್ದರು.