ವಿಜಯಸಾಕ್ಷಿ ಸುದ್ದಿ, ಗದಗ : ಗಡಿಯಲ್ಲಿ ದೇಶ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಸಮಾಜ ಸೇವೆ ಸಲ್ಲಿಸುತ್ತಿರುವ ಮಾಜಿ ಸೈನಿಕರು ದೇಶದ ಸಂಪತ್ತಾಗಿದ್ದಾರೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕಾಟನ್ ಸೇಲ್ ಸೊಸೈಟಿ ಸಭಾಭವನದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ನಡೆದ ಮಾಜಿ ಸೈನಿಕರ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜವನ್ನು ಸುಧಾರಿಸಬೇಕು, ಬಡತನ ನಿವಾರಣೆ ಮಾಡಬೇಕು, ಶೋಷಣೆ ಹಾಗೂ ಭ್ರಷ್ಟಾಚಾರ ಮುಕ್ತವಾಗಿ ಫಲಾನುಭವಿಗಳಿಗೆ ನೇರವಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿದ್ದೇವೆ. ಕಾಂಗ್ರೆಸ್ಗೆ ಉತ್ತಮವಾದ ವಾತಾವರಣವಿದ್ದು, ಉತ್ತರ ಕರ್ನಾಟಕದ 10ಕ್ಕೆ 10 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂಬ ಭರವಸೆ ಬಂದಿದೆ ಎಂದು ಹೇಳಿದರು.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಬೆಂಬಲ ನೀಡಬೇಕು. ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ, ನನಗೆ ಬಲ ತುಂಬಬೇಕು ಎಂದು ಹೇಳಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಮಾಜಿ ಸೈನಿಕರಾದ ರಂಗಪ್ಪ ತಳವಾರ, ಮಲ್ಲಿಕಾರ್ಜುನ ಕೊರಕನವರ, ನರಸಿಂಹಸ್ವಾಮಿ ದೇವಾಂಗಮಠ, ಜಿ.ಬಿ. ಮಾಲಗಿತ್ತಿಮಠ, ರವಿಕುಮಾರ್ ಜಂಗಮನಿ, ಈರಣ್ಣ ಅಣ್ಣಿಗೇರಿ, ಮಹಾಂತೇಶ ಲಕ್ಕುಂಡಿ, ವೀರನಾರಿಯರಾದ ಇಂದಿರಾ ಹೆಬಸೂರ, ಜಯಲಕ್ಷ್ಮಿ ಹೂಗಾರ, ಹೇಮಾ ಪಾಟೀಲ, ಮುಖಂಡರಾದ ಬಸವರಾಜ ಗುರಿಕಾರ, ವಿ.ಎ. ಹಿರೇಮಠ, ವಿಶ್ವನಾಥ, ಅಶೋಕ ಮಂದಾಲಿ, ಬಸವರಾಜ ಬಳ್ಳಾರಿ, ಬಸವರಾಜ ಕಡೇಮನಿ ಸೇರಿ ಹಲವರು ಇದ್ದರು.