ವಿಜಯಸಾಕ್ಷಿ ಸುದ್ದಿ, ಗದಗ : ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸಾವಿರಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಿ, ಆ ನೀಚ ಕೃತ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿರುವದಾಗಿ ಸಂತ್ರಸ್ತ ಮಹಿಳೆಯರೇ ಆರೋಪಿಸಿ ದೂರು ನೀಡಿದ್ದಾರೆ. ಈ ನೀಚ ಕೃತ್ಯದಲ್ಲಿ ಜೆಡಿಎಸ್ ಹಿರಿಯ ನಾಯಕ ರೇವಣ್ಣ ಕೂಡ ಭಾಗಿಯಾಗಿರುವ ಆರೋಪ ಮಾಡಲಾಗಿದೆ. ಪ್ರಧಾನಿ ಮೋದಿಯವರು ಈ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ ಏಕೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಸರ್ಕಾರದ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ನಗರದಲ್ಲಿ ಪ್ರತಿಭಟನೆ ನಡೆಸಿದ ಎಸ್ಡಿಪಿಐ ಕಾರ್ಯಕರ್ತರು, ರಾಜ್ಯ ಸರ್ಕಾರ ಈ ಪ್ರಕರಣವನ್ನು ತನಿಖೆ ಮಾಡಲು SIT ನೇಮಿಸಿರುವುದನ್ನು ಎಸ್.ಡಿ.ಪಿ.ಐ ಪಕ್ಷ ಸ್ವಾಗತ್ತಿಸುತ್ತದೆ. ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಈ ಪ್ರಕರಣದಲ್ಲಿ ನೊಂದ, ಶೋಷಣೆಗೆ ಒಳಗಾದ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿಕೊಡಲು ಮುಂದಾಗಿರುವುದೂ ಸ್ವಾಗತಾರ್ಹ. ಆದಷ್ಟು ಬೇಗ ತನಿಖೆ ಮುಕ್ತಾಯಗೊಳಿಸಿ ಇಂತಹ ನೀಚ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ ರಂಜಾನ್ ಕಡಿವಾಳ್, ಜಿಲ್ಲಾಧ್ಯಕ್ಷ ಬಿಲಾಲ ಗೋಕಾವಿ, ಉಪಾಧ್ಯಕ್ಷ ಹಿದಾಯತುಲ್ಲಾ ಕಾಗದಗಾರ, ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಗೇವಾಡಿ, ಕಾರ್ಯದರ್ಶಿ ಇರ್ಫಾನ್ ಗುಳಗುಂದಿ, ಖಜಾಂಚಿ ಮುಜಾಹೀದ್ ಕಣಕೇನ್ನವರ್, ಅನ್ವರ್ ಮುಲ್ಲಾ, ನವೀದ್ ಕಮಾನಗಾರ, ಯಾಸೀನ್ ಹುಬ್ಬಳ್ಳಿ, ಮುಸ್ತಾಕ್ ಕಟ್ಟಿಮನಿ, ಮುಸ್ತಾಕ್ ಹೊಸಮನಿ, ಸಾಧಿಕ್ ಬುರಬುರೆ, ಮುಕ್ತಾರ್ ಮೌಲ್ವಿ ಭಾಗವಹಿಸಿದ್ದರು.