ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಮಂಗಳವಾರ ಜರುಗಿದ ಬಾಗಲಕೋಟ ಲೋಕಸಭಾ ಮತಕ್ಷೇತ್ರದ ಚುನಾವಣೆಯಲ್ಲಿ ಬಿರು ಬಿಸಿಲಿನ ನಡುವೆ ಶೇ. 78ರಷ್ಟು ಮತದಾನವಾಗಿದೆ. ಮಂಗಳವಾರ ಬೆಳಿಗ್ಗೆ ತಂದೆ ಮೃತರಾಗಿದ್ದರೂ ತಂದೆಯ ಅಂತ್ಯಕ್ರಿಯೆ ಮುಗಿಸಿದ ತಕ್ಷಣವೇ ಮಕ್ಕಳು ಮತ್ತು ಸೊಸೆ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿ ಮತದಾನ ಮಹತ್ವ ಸಾರಿದರು.
ಗ್ರಾಮದ 5ನೇ ವಾರ್ಡ್ನಲ್ಲಿ ಅತಿ ಹೆಚ್ಚು ಶೇ. 84 ರಷ್ಟು ಮತದಾನವಾಗಿದೆ. ಬಿರು ಬಿಸಿಲಿನ ನಡುವೆಯೂ ವೃದ್ಧರು, ವಿಕಲಚೇತನರು, ಮಹಿಳೆಯರು ಮತದಾನ ಕೇಂದ್ರಕ್ಕೆ ತಮ್ಮ ಸಹಾಯಕರೊಂದಿಗೆ ಆಗಮಿಸುತ್ತಿರುವುದು ಕಂಡು ಬಂತು.
ಗ್ರಾಮದ ಕೆ.ಜಿ.ಎಸ್ ಶಾಲೆಯಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆ ಮತದಾನ ಕೇಂದ್ರವನ್ನು ತೆರೆಯಲಾಗಿತ್ತು. ಗ್ರಾ.ಪಂ ಸ್ವೀಪ್ ಸಮಿತಿಯು ಮತಗಟ್ಟೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿ ಮಹಿಳಾ ಮತದಾರರರನ್ನು ಆಕರ್ಷಿಸುವಂತೆ ಮಾಡಿತು. ಒಟ್ಟಾರೆ ಗ್ರಾಮದಲ್ಲಿ ಶಾಂತಿಯುತ ಮತದಾನ ಜರುಗಿತು.
ವಯೋವೃದ್ಧ ನಾಗಪ್ಪ ಸಂಗಟಿ(81) ಮಂಗಳವಾರ ಬೆಳಿಗ್ಗೆ 6ಕ್ಕೆ ನಿಧನರಾಗಿದ್ದರು. ಇವರ ಅಂತ್ಯಕ್ರಿಯೆ ಸಂಜೆ 4 ಕ್ಕೆ ಗ್ರಾಮದಲ್ಲಿ ಜರುಗಿತು. ಅಂತ್ಯಕ್ರಿಯೆ ಮುಗಿದ ತಕ್ಷಣವೇ ಅವರ ಮೂವರು ಪುತ್ರರು ಮತ್ತು ಓರ್ವ ಸೂಸೆ 214ನೇ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದರು.
ನಮ್ಮ ತಂದೆ ಶಿವನ ಪಾದ ಸೇರಿದರು. ಮತ್ತೆ ವಾಪಸ್ ಬರಲಾರರು ಆದರೆ ದೇಶದ ಅಭಿವೃದ್ಧಿಗೆ, ಸಂವಿಧಾನದ ಗೌರವಕ್ಕಾಗಿ ಮತದಾನ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರ ಹಿರಿಯ ಪುತ್ರ ಕರಬಸಪ್ಪ ಹೇಳಿದಾಗ, ಗ್ರಾಮದಲ್ಲಿಯೇ ಇದ್ದರೂ ಮತದಾನದಿಂದ ದೂರ ಉಳಿದವರಿಗೆ ನೀತಿ ಹೇಳಿದಂತಿತ್ತು.
ಇವರ ಈ ಕರ್ತವ್ಯವನ್ನು ಮೆಚ್ಚಿ ಗ್ರಾ.ಪಂ ಸ್ವೀಪ್ ಸಮಿತಿಯ ಮುಖ್ಯಸ್ಥ, ಪಿ.ಡಿ.ಓ ರಾಜಕುಮಾರ ಭಜಂತ್ರಿ ಸೇರಿದಂತೆ ಚುನಾವಣಾ ಸಿಬ್ಬಂದಿಗಳು ಅಭಿನಂದಿಸಿದರು.