ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಲಕ್ಷ್ಮಣಸಾ ನಗರದ ನಿವಾಸಿ ಶ್ರೀಮತಿ ಕಸ್ತೂರಿಬಾಯಿ ಪುಂಡಲೀಕಸಾ ಬದಿ(79) ಗುರುವಾರ ನಿಧನರಾದರು. ಗದಗ-ಬೆಟಗೇರಿ ಲಯನ್ಸ್ ಕ್ಲಬ್ನವರು ಮೃತರ ನೇತ್ರಗಳನ್ನು ದಾನ ಮಾಡುವಂತೆ ಪ್ರೇರಣೆ ನೀಡಿದಾಗ, ಕುಟುಂಬದವರು ಸಹಕಾರ ನೀಡುವ ಮೂಲಕ ನೇತ್ರದಾನಕ್ಕೆ ಮುಂದಾದರು. ಗದಗ ಜಿಮ್ಸ್ ಆಸ್ಪತ್ರೆಯ ತಜ್ಞ ಸಿಬ್ಬಂದಿಗಳು ನೇತ್ರದಾನದ ಪ್ರಕ್ರಿಯೆ ಪೂರ್ಣಗೊಳಿಸಿದರು.
ಲಯನ್ಸ್ ಕ್ಲಬ್ ಸಾರ್ವಜನಿಕರಲ್ಲಿ ನೇತ್ರದಾನದ ಜಾಗೃತಿ ಮೂಡಿಸುತ್ತಿರುವ ಪರಿಣಾಮವಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಇದು ಈ ವರ್ಷದ 17ನೇ ನೇತ್ರದಾನವಾಗಿದೆ. ಮರಣದ ನಂತರ ಮೃತ ವ್ಯಕ್ತಿಯ ಕಣ್ಣುಗಳನ್ನು ಮಣ್ಣು ಮಾಡದೇ, ಬೆಂಕಿಯಲ್ಲಿ ಸುಡದೇ ದಾನ ಮಾಡಿದರೆ ಕಣ್ಣಿಲ್ಲದವರಿಗೆ ಈ ಕಣ್ಣುಗಳನ್ನು ಕಸಿ ಮಾಡಿಸಿಕೊಂಡ ಅಂಧರ ಬಾಳಿಗೆ ಬೆಳಕು ಮೂಡಬಲ್ಲದು. ಆದ್ದರಿಂದ ಮೃತರ ಕುಟುಂಬದವರು ನೇತ್ರದಾನಕ್ಕೆ ಮುಂದಾಗಬೇಕೆಂದು ಕ್ಲಬ್ ಅಧ್ಯಕ್ಷ ರಮೇಶ ಶಿಗ್ಲಿ, ಕಾರ್ಯದರ್ಶಿ ಪ್ರವೀಣ ವಾರಕರ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬದಿ ಕುಟುಂಬಸ್ಥರು, ಪದ್ಮಾನಂದ ಬೇವಿನಕಟ್ಟಿ, ಶ್ರೀನಿವಾಸ ಬಾಕಳೆ, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.