ವಿಜಯಸಾಕ್ಷಿ ಸುದ್ದಿ, ಗದಗ : ಜನಪದ ಸಾಹಿತ್ಯ ಕೇವಲ ಸಾಹಿತ್ಯದ ಒಂದು ಭಾಗವಾಗಿರದೆ, ಜನರ ಜೀವನವೇ ಆಗಿದೆ. ನಮ್ಮ ನಾಡು-ನುಡಿ, ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿದೆ. ಇಂದಿನ ಯುವಕರು ಆಧುನಿಕ ಜನಪ್ರಿಯ ಗೀತೆಗಳಿಗೆ ಮಾರುಹೋಗದೆ ಮೂಲ ಜನಪದ ಸಾಹಿತ್ಯದ ಉಳಿವಿಗೆ ಕೈಜೋಡಿಸಬೇಕೆಂದು ಜನಪದ ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ ಕರೆ ನೀಡಿದರು.
ಸ್ಥಳೀಯ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಹಿಳಾ ಸಂಘದ ಆಶ್ರಯದಲ್ಲಿ ‘ಅವಿರ್ಭಾವ’ ಸಾಂಸ್ಕೃತಿಕ ಹಬ್ಬ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಲೇಜುಗಳಲ್ಲಿ ಸಾಂಸ್ಕೃತಿಕ ಹಬ್ಬದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಜನಪದ, ಸಾಹಿತ್ಯಾಭಿರುಚಿ ಬೆಳೆಯುವಂತ್ತೆ ಮಾಡುತ್ತಿರುವುದು ಶ್ಲಾಘನೀಯ.
ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಿದ್ದು ನಾನು ಎನ್ನುವ ಅಂಹಕಾರ ಬಿಟ್ಟು ನಾವು ಎನ್ನುವ ಸಾಮುದಾಯಿಕ ಭಾವನೆ ಬೆಳೆಸಿಕೊಂಡು ತಂದೆ-ತಾಯಿ ಋಣ ತೀರಿಸುವ ಕೆಲಸ ಮಾಡಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾ ಎಂ.ಎಂ. ಬುರಡಿ ಮಾತನಾಡಿ, ಅವಿರ್ಭಾವ ಸಾಂಸ್ಕೃತಿಕ ಹಬ್ಬ ವಿದ್ಯಾರ್ಥಿಗಳ ಪ್ರತಿಭೆ ಬೆಳೆಸುವಲ್ಲಿ ಪೂರಕವಾಗಿದೆ. ಪಠ್ಯೇತರ ಚಟುವಟಿಕೆಗಳು ನೈತಿಕ ಶಿಕ್ಷಣ ಬೆಳೆಸುವಂತವುಗಳಾಗಿವೆ. ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ಬೆಲೆ ಬರಬೇಕೆಂದರೆ ಸಂಸ್ಕಾರ ಮತ್ತು ಸಹವಾಸ ಮುಖ್ಯವೆಂದು ತಿಳಿಸಿ, ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕ್ರಿಯಾಶೀಲರಾಗಿ ಬೆಳೆಯಬೇಕೆಂದು ಹೇಳಿದರು.
ಈರಮ್ಮ ಅಂಗಡಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಆನಂದ ದೇಸಾಯಿಪಟ್ಟಿ ಸ್ವಾಗತಿಸಿ ಪರಿಚಯಿಸಿದರು. ಪ್ರೊ. ವಿನಯ ಮರಡೂರ ವಿದ್ಯಾಥಿಗಳ ಸತ್ಕಾರ ಸಮಾರಂಭ ನಡೆಸಿದರು. ಪ್ರೊ. ಕೆ. ಎಸ್. ಅಣ್ಣಿಗೇರಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ ಕೆ.ವಿ. ಬಾಗಲಕೋಟಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಶ್ವೇತಾ ಸಿ ವಂದಿಸಿದರು.