ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇತ್ತೀಚಿನ ಬರಗಾಲದ ಬವಣೆಯಿಂದ ತತ್ತರಿಸುತ್ತಿರುವ ಮನುಷ್ಯರು ಮತ್ತು ಪ್ರಾಣಿಗಳು, ನೆರಳಿಗಾಗಿ ಮರಗಳ ಮೊರೆಹೋಗುವದು ಸಹಜ. ಆದರೆ ಗಿಡಗಳನ್ನು ಬೆಳೆಸಲು ಚಿಂತಿಸದೆ ಗಿಡದ ನೆರಳನ್ನು ಹುಡುಕುವ ನಮ್ಮ ಪ್ರವೃತ್ತಿ ಇನ್ನು ಮುಂದೆಯಾದರೂ ಬದಲಾಗಬೇಕು ಎನ್ನುವ ನಿಟ್ಟಿನಲ್ಲಿ ಸರಕಾರ ಗಿಡ ಮರಗಳನ್ನು ಬೆಳೆಸುವದಕ್ಕೆ ಆದ್ಯತೆ ನೀಡುತ್ತಿದೆ.
ಮರಗಳನ್ನು ಬೆಳೆಸಲು ಸಸಿಗಳು ದೊರಕುವುದಿಲ್ಲ ಎನ್ನುವ ದೂರಿಗೆ ಉತ್ತರವಾಗಿ ಲಕ್ಷ್ಮೇಶ್ವರ ಸಮೀಪದ ಶೆಟ್ಟಿಕೇರಿ ಗ್ರಾಮದಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆಯವರು ಈಗಾಗಲೇ ರೈತರಿಗೆ ಸಾರ್ವಜನಿಕರಿಗೆ ನೀಡಲು ಅನೂಕೂಲವಾಗುವಂತೆ ಲಕ್ಷಾಂತರ ಸಸಿಗಳನ್ನು ಬೆಳೆಸಿದ್ದು, ರೈತರಿಗೆ ರಿಯಾಯತಿ ದರದಲ್ಲಿ ಭವಿಷ್ಯತ್ತಿನಲ್ಲಿ ಲಾಭವನ್ನು ತಂದು ಕೊಡುವ ಸಸಿಗಳನ್ನು ಬೆಳೆಸಲು ಉತ್ತೇಜನ ನೀಡುತ್ತಿದೆ.
ಶೆಟ್ಟಿಕೇರಿ ಗ್ರಾಮದಲ್ಲಿ ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಇಲ್ಲಿನ ಸುಮಾರು ಸುಮಾರು 20-25 ಎಕರೆ ಪ್ರದೇಶದಲ್ಲಿ ಪ್ರಾರಂಭಿಸಿರುವ ಸಸ್ಯಪಾಲನಾ ಕೇಂದ್ರದಲ್ಲಿ ವಿವಿಧ ನಮೂನೆಯ ಲಕ್ಷಾಂತರ ಸಸ್ಯಗಳನ್ನು ಬೆಳೆಸಲಾಗುತ್ತಿದ್ದು, ಸಸ್ಯಪಾಲನಾ ಕೇಂದ್ರವು ಸದ್ದಿಲ್ಲದೆ ಹಸಿರು ಕ್ರಾಂತಿಯಲ್ಲಿ ತೊಡಗಿಸಿಕೊಂಡಿರುವದು ಪರಿಸರ ಪ್ರೇಮಿಗಳನ್ನು ಮೆಚ್ಚಿಸದೆ ಇರಲಾರದು. ಇದರಲ್ಲಿ ಅರಣ್ಯ ಇಲಾಖೆಯ ಎಸ್.ಎಲ್. ವಿಭೂತಿ ಮತ್ತು ಅರಣ್ಯ ರಕ್ಷಕ ಮಂಜುನಾಥ ದೊಡ್ಡವಾಡ, ಮಾಂತೇಶ ಹಾಗೂ ತಂಡದವರ ಶ್ರಮ ಎದ್ದು ಕಾಣುತ್ತಿದೆ.
ಇಲ್ಲಿನ ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಹೆಬ್ಬೇವು, ಬೇವು, ಹುಣಸೆ, ಮಾವು, ಅರಳಿ, ಸಾಗವಾನಿ, ನುಗ್ಗೆ, ಬದಾಮಿ, ಕರಬೇವು, ಪೇರಲ, ಸೀತಾಫಲ, ಮಹಾಗನಿ, ದಾಸವಾಳ, ನೀರಲ, ನೆಲ್ಲಿ, ಬೀಟೆ, ರಕ್ತಚಂದನ, ಶ್ರೀಗಂದ, ಚಳ್ಳೆ, ಹುಣಸೆ, ಹೊಳೆಮತ್ತಿ, ಹೊಳೆದಾಸವಾಳ, ಬಿದಿರು, ಸಿಲ್ವರ್ಓಕ್ ಸೇರಿದಂತೆ ಸುಮಾರು ೨ ಲಕ್ಷಕ್ಕೂ ಅಧಿಕ ಸಸಿಗಳನ್ನು ಬೆಳೆಸಲಾಗಿದೆ. ಪರಿಸರ ಸಂರಕ್ಷಣೆಯಲ್ಲಿ ತೊಡಗುವ ಹಲವಾರು ಸಂಘ ಸಂಸ್ಥೆಗಳು, ರೈತರು ಈಗಾಗಲೇ ಮರಗಳನ್ನು ಬೆಳೆಸಲು ಇಲ್ಲಿಂದ ಸಸಿಗಳನ್ನು ಕೊಂಡ್ಯೊಯ್ಯುತ್ತಿದ್ದಾರೆ.
ಸಸಿಗಳಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಉಪವಲಯ ಅರಣ್ಯಾಧಿಕಾರಿ ಎಂ.ಸಿ.ಹಳ್ಳಿಕೇರಿ-9741977651, ಅರಣ್ಯ ಪಾಲಕ ಮಂಜುನಾಥ ದೊಡ್ಡವಾಡ-9663011564, ಮಾಂತೇಶ-6362898696 ಇವರನ್ನು ಸಂಪರ್ಕಿಸಬಹುದಾಗಿದೆ.
ಪ್ರಾದೇಶಿಕ ಅರಣ್ಯ ಇಲಾಖೆಯಿಂದ ವಿವಿಧ ತಳಿಯ ಸಸಿಗಳನ್ನು ರೈತರಿಗೆ ರಿಯಾಯತಿ ದರದಲ್ಲಿ ನೀಡಲಾಗುತ್ತಿದ್ದು, ಹೆಬ್ಬೇವು ಹಾಗೂ ನುಗ್ಗೆ ರೈತರಿಗೆ ಆದಾಯ ತಂದುಕೊಡಲಿದೆ. ಸುಮಾರು 8-10 ವರ್ಷಗಳಲ್ಲಿ ಹೆಬ್ಬೇವು ಲಕ್ಷಾಂತರ ರೂ ಆದಾಯ ನೀಡುತ್ತದೆ. ರಸ್ತೆಯ ಅಕ್ಕಪಕ್ಕಗಳಲ್ಲಿ ನೆಡಲು ಹಾಗೂ ರೈತರು ಹೊಲಗಳಲ್ಲಿ ನೆಡಲು ಸಸಿಗಳನ್ನು ರಿಯಾಯತಿ ದರದಲ್ಲಿ ನೀಡಲಾಗುತ್ತಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು.
– ರಾಮಪ್ಪ ಪೂಜಾರ.
ಪ್ರಾದೇಶಿಕ ವಲಯ ಅಧಿಕಾರಿ.ಮೊದಲು ರೈತರಿಗೆ ನೀಡಲಾಗುವ ಸಸಿಗಳ ಬೆಲೆ 23 ರೂ.ನಂತೆ ಇದ್ದು, ಸರಕಾರ ಮರ-ಗಿಡಗಳ ಬೆಳವಣಿಗೆಗೆ ಅನೂಕೂಲ ಮಾಡಿಕೊಡುವ ಉದ್ದೇಶದಿಂದ ಪ್ರತಿ ಗಿಡಕ್ಕೆ 6 ರೂನಂತೆ ನಿಗದಿ ಮಾಡಿದೆ. ಸಸಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರು ಮುಂದಾಗಬೇಕು. ಯಾವುದೇ ಸಂಘ-ಸಂಸ್ಥೆಗಳು ಆಸಕ್ತಿವಹಿಸಿ ಬಂದಲ್ಲಿ ನಮ್ಮಲ್ಲಿ ಸಸಿಗಳನ್ನು ನೀಡಲಾಗುತ್ತದೆ.
– ಕೌಶಿಕ್ ದಳವಾಯಿ.
ಸಾಮಾಜಿಕ ವಲಯ ಅರಣ್ಯ ಇಲಾಖೆ ಅಧಿಕಾರಿ.