ವಿಜಯಸಾಕ್ಷಿ ಸುದ್ದಿ, ಗದಗ : ಗದಗ ನಗರದ ಅಡವೀಂದ್ರಸ್ವಾಮಿ ಮಠದ ಶಿವಾನುಭವ ಗೋಷ್ಠಿಯಲ್ಲಿ ವಿಶ್ವಗುರು ಬಸವೇಶ್ವರ ಚರಿತ್ರೆಯನ್ನು ಅನುಭವ ಮಂಟಪದ ಸಾರವನ್ನು ನಾಟಕದ ರೂಪದಲ್ಲಿ ಯಶಸ್ವಿಯಾಗಿ ಪ್ರದರ್ಶನ ಮಾಡುವ ಮೂಲಕ ಇಂದಿನ ಯುವ ಪೀಳಿಗೆಗೆ ಬಸವಣ್ಣನವರ ತತ್ವ-ಸಿದ್ಧಾಂತಗಳನ್ನು ಕಣ್ಮುಂದೆ ತೆರೆದಿಟ್ಟಿರುವದು ಶ್ಲಾಘನೀಯ ಎಂದು ಮಹೇಶ್ವರ ಸ್ವಾಮೀಜಿಗಳು ಹೇಳಿದರು.
ನಾಟಕವನ್ನು ಪ್ರದರ್ಶಿಸಿದ ರಂಗನಿರ್ದೇಶಕಿ ಮತ್ತು ಅಕ್ಕಮಹಾದೇವಿ ಪಾತ್ರ ನಿರ್ವಹಿಸಿದ ಗೀತಾ ಹೂಗಾರ, ನಿತ್ಯಂ ಯೋಗ ಕೇಂದ್ರದ ಸುಮಂಗಲಾ ಹದ್ಲಿ, ಮಹಿಳಾ ಸದಸ್ಯರು ಪಾತ್ರದ ರೂಪಕಗಳನ್ನು ಪ್ರದರ್ಶಿಸಿದರು.
ಚಿಕ್ಕಮಕ್ಕಳಿಂದ ವಚನವನ್ನು ಆಧರಿಸಿ ರೂಪಕ ನೃತ್ಯವನ್ನು ನಿರೂಪಿಸಿದರು.
ಸಭೆಯಲ್ಲಿ ಶ್ರೀಮಠದ ಹಿರಿಯರ ಜನ್ಮದಿನವನ್ನು ಆಚರಿಸಲಾಯಿತು. ಅಕ್ಷತಾ ಹಿರೇಮಠ ಸಂಗೀತ ಸೇವೆಯನ್ನು ಮಾಡಿದರು. ದಿವಂಗತ ಎಚ್.ವ್ಹಿ. ಹುಲ್ಲತ್ತಿ ಅವರಿಗೆ ಶೃದ್ಧಾಂಜಲಿ ಅರ್ಪಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು. ಪ್ರಸಾದ ಸೇವೆಯನ್ನು ಎಲ್.ಎಸ್. ನೀಲಗುಂದ, ಶ್ರೀನಿವಾಸ ಅರಸಿದ್ಧಿ, ಸಂತ ರಾಜಮಣಿ ಕಲಬುರ್ಗಿ, ಕೃಪಾ ಹೂಗಾರ ನಿರ್ವಹಿಸಿದರು.
ವಿನಾಯಕ ಸಜ್ಜನ ಸ್ವಾಗತಿಸಿದರು, ಯು.ಆರ್. ಭೂಸನೂರಮಠ, ಸಿದ್ಧಣ್ಣ ಜವಳಿ ನಿರೂಪಿಸಿದರು. ಕೆ.ಎಚ್. ಬೇಲೂರ, ಬಿ.ಎಂ. ಬಿಳೆಯಲಿ, ಜಿ.ಎಂ. ಯಾನಮಶೆಟ್ಟಿ, ಗರಡಿನವರ ಮುಂತಾದವರಿದ್ದರು.