ವಿಜಯಸಾಕ್ಷಿ ಸುದ್ದಿ, ಗದಗ : ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಪಂಚವಟಿ ವನಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಪಂಚವಟಿ ಸಸ್ಯಗಳನ್ನು ನೆಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಪ್ರತಿಯೊಬ್ಬರೂ ಮನೆಯ ಅಂಗಳದಲ್ಲಿ ಸಸಿ ನೆಟ್ಟು ಸಂರಕ್ಷಿಸಬೇಕು. ಈ ದಿಸೆಯಲ್ಲಿ ಗಿಡಮರ ಉಳಿಸಿ ಪರಿಸರ ಸಂರಕ್ಷಣೆ ಮಾಡಬೇಕು.
ಗಿಡಮರಗಳನ್ನು, ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಂ.ಎಸ್. ಉಪ್ಪಿನ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯಪೂರ್ಣ ಜೀವನ ನಡೆಸಲು ಗಿಡ-ಮರಗಳನ್ನು ಬೆಳೆಸೋಣ ಎಂದರು.
ನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ ಗೌರವ ಅಧ್ಯಕ್ಷ ಡಾ. ಎಸ್.ಆರ್.ಹಿರೇಮಠ ಮಾತನಾಡಿ, ಪಂಚವಟಿಯು ಪೌರಾಣಿಕ ಹಿನ್ನೆಲೆಯುಳ್ಳ ಔಷಧ ಮರಗಳಾಗಿವೆ ಎಂದರು. ಡಾ.ಶಿವಶಂಕರ ಪೂಜಾರ ಮಾತನಾಡಿ, ಬೇಸಿಗೆಯಲ್ಲಿ ಕೂಲರ್ಗೆ ಹಾಕಿದಷ್ಟು ನೀರನ್ನು ಗಿಡಕ್ಕೆ ಹಾಕಿದರೆ ವಾತಾವರಣ ಇಷ್ಟೊಂದು ಬಿಸಿಯಾಗುತ್ತಿರಲಿಲ್ಲ. ಇನ್ನಾದರೂ ಗಿಡಮರಗಳನ್ನು ಬೆಳೆಸೋಣ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಡಾ. ವೆಂಕಟೇಶ ಪೂಜಾರ, ಡಾ. ಪಲ್ಲೇದ, ಡಾ.ದೊಡ್ಡಮನಿ, ಡಾ. ರವಿ ಮೂಲಿಮನಿ, ನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೊಸಿಯೇಶನ್ ಸದಸ್ಯರು ಹಾಜರಿದ್ದರು.
ನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷರಾದ ಡಾ.ರಾಜೇಶ್ವರ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.