ವಿಜಯಸಾಕ್ಷಿ ಸುದ್ದಿ, ರೋಣ : ಜು.21ರಂದು ರೋಣ ನಗರದಲ್ಲಿ ಜರುಗುವ ಜನಸ್ಪಂದನಾ ಸಭೆಯಲ್ಲಿ ಖುದ್ದು ಶಾಸಕ ಜಿ.ಎಸ್. ಪಾಟೀಲ ಭಾಗವಹಿಸಲಿದ್ದು, ತಾಲೂಕು ಮಟ್ಟದ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ತಹಸೀಲ್ದಾರ್ ನಾಗರಾಜ ಕೆ ಹೇಳಿದರು.
ಅವರು ಮಂಗಳವಾರ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಬಾರಿಯ ಜನಸ್ಪಂದನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೂ ಭಾಗವಹಿಸಲಿದ್ದು, ತಮ್ಮ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕರ ಅರ್ಜಿಗಳಿದ್ದರೆ ಅವುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದರು.
ಸ್ವತಃ ಶಾಸಕರು ಸಭೆಯಲ್ಲಿ ಭಾಗವಹಿಸುವ ಲಕ್ಷಣಗಳಿದ್ದು, ತಾಲೂಕಾ ಮಟ್ಟದ ಅಧಿಕಾರಿಗಳು ಖುದ್ದು ಸಭೆಯಲ್ಲಿ ಹಾಜರಿರಬೇಕು. ಮುಖ್ಯವಾಗಿ ತಾಲೂಕಾ ಮಟ್ಟದ ಸಭೆ ಆಗಿದ್ದರಿಂದ ಜನರು ಸಮಸ್ಯೆಗಳನ್ನು ಹೊತ್ತು ತರುವುದು ಸಹಜ. ನಿಷ್ಕಾಳಜಿ ಮಾಡದೆ ಸ್ಥಳದಲ್ಲಿಯೇ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ಮಾಡಬೇಕು ಎಂದು ಸಲಹೆ ನೀಡಿದರು.
ಉಪತಹಸೀಲ್ದಾರ್ ಜೆ.ಟಿ. ಕೊಪ್ಪದ, ಅಕ್ಷರ ದಾಸೋಹಾಧಿಕಾರಿ ಬಸವರಾಜ ಅಂಗಡಿ, ಪಿಡಬ್ಲುಡಿ ಇಇ ಬಲವಂತ ನಾಯ್ಕರ, ಆರ್ಡಬ್ಲುಎಸ್ ಅಭಿಯಂತರ ಮಹದೇವಪ್ಪ ಸೇರಿದಂತೆ ಕಂದಾಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲು ಪ್ರತ್ಯೇಕ ಕೌಂಟರ್ಗಳ ವ್ಯವಸ್ಥೆ, ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನಿಗಾವಹಿಸಬೇಕು. ಕೌಂಟರ್ಗಳಲ್ಲಿ ಗ್ರಾಮಾಡಳಿತಾಧಿಕಾರಿಗಳಿದ್ದು ಅರ್ಜಿಗಳನ್ನು ಸ್ವೀಕರಿಸಬೇಕು. ಎಚ್ಚರಿಕೆಯಿಂದ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸಿ. ಸಭೆ ಆಯೋಜನೆ ಮಾಡಲು ಸ್ಥಳ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ನೀಡಲಾಗುವುದು.
– ನಾಗರಾಜ ಕೆ.
ರೋಣ ತಹಸೀಲ್ದಾರರು.