ವಿಜಯಸಾಕ್ಷಿ ಸುದ್ದಿ, ಗದಗ : ಹಲವಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಣೆಯಲ್ಲಿರುವ ಯೋಗ ವಿದ್ಯೆಯು ಋಷಿ ಮುನಿಗಳಿಂದ ಸನ್ಮಾರ್ಗ ಹಾಗೂ ಉತ್ತಮ ಜೀವನ ಶೈಲಿಯಾಗಿ ಬೆಳೆದು ಬಂದಿದೆ ಎಂದು ಡಾ.ಅಶೋಕ ಮತ್ತಿಗಟ್ಟಿ ಹೇಳಿದರು.
ಅವರು ಗದಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜರುಗಿದ ಯೋಗ ತರಬೇತಿ ಹಾಗೂ ಆಯುಷ್ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ್ದ ಡಾ. ಸಾಯಿಪ್ರಕಾಶ ಮಡಿವಾಳರ, ಡಾ.ಸಂಜೀವ ನಾರಪ್ಪನವರ ಮಾತನಾಡಿ, ಆಯುಷ್ ಪದ್ಧತಿಗಳಾದ ಯೋಗ, ಆಯುರ್ವೆದ, ಪ್ರಕೃತಿ ಚಿಕಿತ್ಸೆಗಳು ಮನುಷ್ಯನ ವಿವಿಧ ನೋವುಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಬಲ್ಲ ಉತ್ತಮ ಸಾಧನಗಳಾಗಿವೆ. ಯುವ ಪೀಳಿಗೆ ಇದನ್ನು ಅನುಸರಿಸಿ ಉಳಿಸಿ-ಬೆಳೆಸುವ ಕಾರ್ಯ ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಲಯದ ಮೇಲ್ವಿಚಾರಕಿ ಸುಜಾತಾ ಪಾಟೀಲ, ಮನುಷ್ಯನ ಆರೋಗ್ಯದ ಹಲವಾರು ಸಮಸ್ಯೆಗಳಿಗೆ ಸೂಕ್ತವಾದ ಉತ್ತರ ಆಯುರ್ವೆದ ಶಾಸ್ತçದಲ್ಲಿದೆ. ಯೋಗದಂತಹ ಪ್ರಕ್ರಿಯೆಗಳು ನಮ್ಮನ್ನು ಸದೃಢರನ್ನಾಗಿ ಮಾಡುತ್ತವೆ ಎಂದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಗದಗ ಶಾಖೆಯ ಯೋಗ ಗುರು ಮುರಳೀಧರ ಶ್ಯಾವಿ ಯೋಗಾಸನ ಹಾಗೂ ಅವುಗಳ ವಿಧಾನಗಳು, ಉಪಯೋಗಗಳನ್ನು ತಿಳಿಸಿ ಯೋಗ ಮಾಡುವ ವಿಧಾನಗಳನ್ನು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದರು.
ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಿಲಯದ ಐಶ್ವರ್ಯ ಹೊಸಮನಿ, ಶ್ವೇತಾ ಬಾಗೇವಾಡಿ ಅವರುಗಳನ್ನು ಗೌರವಿಸಲಾಯಿತು. ಪವಿತ್ರಾ ಕನಕಗಿರಿ ಹಾಗೂ ಟಿ. ವನಜಾಕ್ಷೀ ಪ್ರಾರ್ಥಿಸಿದರು.
ಶಿಲ್ಪಾ ಲಮಾಣಿ ಸ್ವಾಗತಿಸಿದರು. ಪಾರ್ವತಿ ದೊಡ್ಡಮನಿ ಪರಿಚಯಿಸಿದರು. ಮುಕ್ತಾ ಹಡಪದ ನಿರೂಪಿಸಿದರು. ಕೊನೆಗೆ ಐಶ್ವರ್ಯ ಹೊಸಮನಿ ವಂದಿಸಿದರು.