ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ 9 ವರ್ಷಗಳಿಂದ ನಿವೃತ್ತಿ, ನಿಧನದಿಂದ ಖಾಲಿಯಾದ ಹುದ್ದೆಗಳನ್ನು ತುಂಬಲು ಸರಕಾರ ಅನುಮತಿ ನೀಡಿಲ್ಲ. ಇದರಿಂದ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ನಿವೃತ್ತಿಯಿಂದ ಖಾಲಿ ಆದ ಹುದ್ದೆಗಳನ್ನು ತುಂಬಲು ಸರಕಾರದ ಅನುಮತಿ ಪಡೆಯಲು ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದ್ದಾರೆ.
ನಗರದ ನೀರಿಕ್ಷಣಾ ಮಂದಿರದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ನೌಕರರ ಸಂಘಟನೆಗಳ ಪದಾಧಿಕಾರಿಗಳ ಜೊತೆಗೆ ಚರ್ಚಿಸಿ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲು ನಿರ್ಧರಿಸಲಾಯಿತು.
ಜುಲೈ 3ನೇ ವಾರದಲ್ಲಿ ನಡೆಯುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಇದಕ್ಕೆ ಸರಿಯಾದ ಪ್ರತಿಕ್ರಿಯೆ ಬರದಿದ್ದರೆ ಹಂತ ಹಂತವಾಗಿ ಹೋರಾಟ ಮಾಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಗದಗ ಜಿಲ್ಲೆಯ ವಿವಿಧ ಅನುದಾನಿತ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳಾದ ಎಸ್.ಎಸ್. ದೇಸಾಯಿ, ಹೆಚ್.ಕೆ. ದಾಸರ, ಎಂ.ಡಿ. ಬಟ್ಟೂರ, ಬಿ.ಎಸ್. ಹಿರೇಮಠ, ವಿ.ಬಿ. ಶೇಷಗಿರಿ, ಪ್ರಾಚಾರ್ಯರಾದ ಅಶೋಕ ಅಂಗಡಿ, ಈರಣ್ಣ ಹಾದಿಮನಿ, ಜಿ.ಬಿ. ಗುಡಿಮನಿ ಹಾಗೂ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳಾದ ಎಸ್.ಎಸ್. ಸೋಮಣ್ಣವರ, ವಾಯ್.ಸಿ. ಪಾಟೀಲ, ಪಿ.ಎಚ್. ಕಡಿವಾಳ, ನಾಗರಳ್ಳಿ, ಎಮ್.ಕೆ. ಲಮಾಣಿ, ಎ.ಎಸ್. ಪಾಟೀಲ, ಮುಂತಾದವರು ಉಪಸ್ಥಿತರಿದ್ದರು. ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಮ್.ಸಿ. ಕಟ್ಟಿಮನಿ ವಂದಿಸಿದರು.
ಜುಲೈ 15ರ ಒಳಗಾಗಿ ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಹೋರಾಟ ಸಮಿತಿ ರಚನೆ ಮಾಡಲು ಸಭೆಯನ್ನು ಕರೆಯಲು ನಿರ್ಣಯಿಸಲಾಯಿತು. ಸಭೆಗೆ ಕೆ.ಎಲ್.ಇ ಸಂಸ್ಥೆ ಬೆಳಗಾವಿ, ಬಿ.ಎಲ್.ಡಿ ಸಂಸ್ಥೆ ವಿಜಯಪುರ, ಬಸವೇಶ್ವರ ವಿದ್ಯಾ ಸಂಸ್ಥೆ ಬಾಗಲಕೋಟೆ, ಕನಕದಾಸ ಶಿಕ್ಷಣ ಸಮಿತಿ ಗದಗ, ತೋಂಟದಾರ್ಯ ವಿದ್ಯಾಪೀಠ ಗದಗ, ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ನರೇಗಲ್ಲ, ಜಗದ್ಗರು ಅನ್ನದಾನೇಶ್ವರ ವಿದ್ಯಾ ಸಮಿತಿ ಮುಂಡರಗಿ ಹೀಗೆ ಉಳಿದ ಎಲ್ಲ ಸಂಸ್ಥೆಗಳ ಆಡಳಿತ ಮಂಡಳಿಯ ಮುಖ್ಯಸ್ಥರನ್ನು ಹಾಗೂ ಎಲ್ಲ ನೌಕರರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಲು ನಿರ್ಧರಿಸಲಾಯಿತು.