ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಡೆಂಗ್ಯೂ ಸೊಳ್ಳೆಗಳಿಂದ ಬರುವ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದನ್ನು ನಿರ್ಲಕ್ಷಿಸಿದಲ್ಲಿ ಪ್ರಾಣಕ್ಕೆ ಅಪಾಯ ತಂದೊಡ್ಡಬಹುದು. ಈ ಹಿನ್ನೆಲೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಪ್ರತಿಯೊಬ್ಬ ನಾಗರಿಕರು ಮುಂದಾಗಬೇಕು ಎಂದು ಶಿರಹಟ್ಟಿ ತಾಲೂಕಾ ವೈದ್ಯಾಧಿಕಾರಿ ಡಾ. ಸುಭಾಷ್ ದಾಯಗೊಂಡ ಹೇಳಿದರು.
ಅವರು ಪಟ್ಟಣದ ಪುರಸಭೆ ಸಭಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿ.ಪಂ ಗದಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಗದಗ ಹಾಗೂ ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಮುಂಜಾಗ್ರತಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ಸೊಳ್ಳೆಗಳನ್ನು ಅಲಕ್ಷಿಸಿದರೆ ಪ್ರಾಣಾಂತಿಕ ಕಾಯಿಲೆಗಳು ಬರಬಹುದು. ಮನುಷ್ಯನ ದೇಹದಲ್ಲಿರುವ ಪ್ರೋಟೀನ್ ತಿಂದು ಬದುಕುವ ಈಡಿಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಮಾರಣಾಂತಿಕ ಡೆಂಗಿ ರೋಗ ಬರುತ್ತದೆ. ಇವುಗಳು ನಿಂತ ನೀರಿನಲ್ಲಿ ತಮ್ಮ ಸಂತಾನ ಅಭಿವೃದ್ಧಿಯನ್ನು ಮಾಡುತ್ತವೆ. ಅದಕ್ಕಾಗಿ ನಮ್ಮ ಸುತ್ತಮುತ್ತಲು ಹಾಗೂ ಮನೆ, ಶಾಲೆಗಳಲ್ಲಿ ನೀರನ್ನು ತೆರೆದಿಡಬಾರದು. ಅಲ್ಲದೆ ಅಲ್ಲಲ್ಲಿ ನಿಂತಿರುವ ನೀರನ್ನು ಆಗಾಗ್ಗೆ ಸ್ವಚ್ಛಗೊಳಿಸುವ ಮೂಲಕ ಲಾರ್ವಾ ಉತ್ಪತ್ತಿಯನ್ನು ತಡೆಗಟ್ಟಬಹುದು. ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಧರ್ಮರ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿದರು. ಸಭೆಯಲ್ಲಿ ಉಪತಹಸೀಲ್ದಾರ ಪ್ರಶಾಂತ ಕಿಮಾಯಿ, ಪುರಸಭೆ ಸದಸ್ಯರಾದ ಜಯಕ್ಕ ಕಳ್ಳಿ, ರಾಜಣ್ಣ ಕುಂಬಿ, ಜಯಮ್ಮ ಅಂದಲಗಿ, ರಮೇಶ ಗಡದವರ, ಶಿಗ್ಲಿ ಬಿಎಚ್ಇಓ ಪಿ.ಎಸ್. ಕರ್ಜಗಿ, ಎಫ್.ಬಿ. ಹೂಗಾರ, ಜಗದೀಶ ಕೊಡಿಹಳ್ಳಿ, ಹಿರಿಯ ಆರೋಗ್ಯ ನಿರೀಕ್ಷಕ ಬಿ.ಎಸ್. ಹಿರೇಮಠ, ಸಿಡಿಪಿಓ ಮೃತ್ಯುಂಜಯ ಜಿ, ತೋಟಗಾರಿಕೆ ಇಲಾಖೆ ಶಿವಾನಂದ ಬ್ಯಾನಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಯ್ಯ ಕುಲಕರ್ಣಿ, ಸಿಆರ್ಪಿ ಉಮೇಶ ನೇಕಾರ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಹನುಮಂತ ನಂದೆಣ್ಣವರ, ನೇತ್ರಾ ಹೊಸಮನಿ ಸೇರಿದಂತೆ ಅನೇಕರಿದ್ದರು.
ತಹಸೀಲ್ದಾರ ವಾಸುದೇವ ಸ್ವಾಮಿ ಮಾತನಾಡಿ, ಡೆಂಗ್ಯೂ ರೋಗ ಇತ್ತಿಚೇಗೆ ಬೇರೆಡೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಕೈಜೋಡಿಸಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಬಹುದಾಗಿದೆ. ಇವುಗಳ ನಿಯಂತ್ರಣಕ್ಕೆ ಪುರಸಭೆ ಹಾಗೂ ಸ್ಥಳೀಯ ಆಡಳಿತದಿಂದ ಮಾಡುವ ಎಲ್ಲ ಸ್ವಚ್ಛತಾ ಕಾರ್ಯಗಳಿಗೆ ಸಹಭಾಗಿತ್ವ ನೀಡಿ ರೋಗಗಳ ತಡೆಗೆ ಮುಂದಾಗಬೇಕು ಎಂದು ಹೇಳಿದರು.