ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಾರಹುಣ್ಣಿಮೆ ದಿನದಂದು ರೈತರು ತಮ್ಮ ಮನೆಗಳಲ್ಲಿ ಎತ್ತುಗಳನ್ನು ಸಿಂಗರಿಸಿ ಪೂಜಿಸಿ, ಅವುಗಳಿಗೆ ನಮಿಸಿ ಸಂಜೆ ಎತ್ತುಗಳನ್ನು ಮೆರವಣಿಗೆ ಮಾಡುವ ಮೂಲಕ ರೈತರ ಪಾಲಿನ ಆರಾದ್ಯ ದೈವವಾಗಿರುವ ಎತ್ತುಗಳಿಗೆ ಗೌರವ ಭಾವನೆಯಿಂದ ನೋಡುತ್ತಾರೆ. ಅಲ್ಲಿಂದ 15 ದಿನಗಳ ನಂತರ ಬರುವ ಅಮವಾಸ್ಯೆ ದಿನದಂದು ರೈತರು ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಇಟ್ಟು ಭಕ್ತಿಯಿಂದ ಪೂಜಿಸುತ್ತಾರೆ.
ವಿಶೇಷವಾಗಿ, ಉತ್ತರ ಕರ್ನಾಟಕದ ಭಾಗದಲ್ಲಿ ಈ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಪೂಜಿಸುವ ಮೂಲಕ ರೈತನ ಬದುಕಿನ ಎರಡು ಕಣ್ಣುಗಳಾಗಿ ಮಣ್ಣು ಮತ್ತು ಎತ್ತು ಎರಡನ್ನೂ ಪೂಜಿಸುವ ಪರಿಪಾಠವನ್ನು ಹೊಂದಿದ್ದಾರೆ.
ಶುಕ್ರವಾರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಬಹುತೇಕ ಮನೆಗಳಲ್ಲಿ ಮಣ್ಣೆತ್ತುಗಳನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸಿದರು.
ಶಿಗ್ಲಿ ಗ್ರಾಮದ ಈರಣ್ಣ ಪವಾಡದ ಅವರ ನಿವಾಸದಲ್ಲಿ ಶುಕ್ರವಾರ ಮಣ್ಣೆತ್ತಿನ ಅಮವಾಸ್ಯೆಯನ್ನು ಅದ್ದೂರಿಯಾಗಿ ಆಚರಿಸಿದರು. ಮಣ್ಣಿನ ಎತ್ತುಗಳನ್ನು ಮನೆಗೆ ತಂದಾಗ ಬಾಗಿಲಲ್ಲಿ ನಿಜವಾದ ಎತ್ತುಗಳಿಗೆ ಮಾಡುವಂತೆ ಪೂಜೆ ಆರತಿ ಮಾಡಿ ಮನೆಯೊಳಗೆ ಬರಮಾಡಿಕೊಂಡು ನಂತರ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ವೀರಣ್ಣ ಪವಾಡದ, ನಿರ್ಮಲಾದೇವಿ, ಲಾವಣ್ಯ, ಅನ್ನದಾನೇಶ್ವರ, ಲಕ್ಷ್ಮಿ, ವೀರಸೋಮೇಶ್ವರ, ಶಿವಯೋಗರಾಜ, ವಿಜಯವೀಣಾ, ನಮ್ರತಾ ಸೇರಿದಂತೆ ಅನೇಕರಿದ್ದರು.