ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಬಿಂಬಿಸುವ ಜಾನಪದ ಕಲೆಯಲ್ಲಿಯ ಸಾಹಿತ್ಯದ ಅರ್ಥವನ್ನು ಅರ್ಥೈಸಿಕೊಂಡಾಗ ಮಾತ್ರ ಈ ಕಲೆಯ ಮಹತ್ವ ತಿಳಿಯುತ್ತದೆ ಎಂದು ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಹೇಳಿದರು.
ಇಲ್ಲಿಯ ಸಮೀಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದಲ್ಲಿ ನಡೆದ 298ನೇ ಶಿವಾನುಭ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪೂರ್ವಜರು ಈ ಜನಪದ ಕಲೆಯನ್ನು ಮದುವೆ, ಕೃಷಿ ಚಟುವಟಿಕೆ, ಜಾತ್ರೆ, ಹಬ್ಬ-ಹರಿದಿನಗಳಲ್ಲಿ ಸಾಂಪ್ರದಾಯಿಕವಾಗಿ ಅಳವಡಿಸಿಕೊಂಡು ಬಂದಿದ್ದಾರೆ. ಈ ಕಲೆಯು ಇಂದಿನ ತಂತ್ರಜ್ಞಾನ ಕಾಲದಲ್ಲೂ ಜನನಿತವಾಗಿ ಬೆಳದು ಬರುತ್ತಿರುವುದು ಶ್ಲಾಘನೀಯ. ಈ ದಿಸೆಯಲ್ಲಿ ಜಾನಪದ ಕಲೆಯ ಕಾರ್ಯಕ್ರಮಗಳಿಗೆ ಸಹಾಯ, ಸಹಕಾರ ನೀಡುವುದರೊಂದಿಗೆ ಪ್ರೋತ್ಸಾಹ ನೀಡಬೇಕೆಂದರು.
ಜಾನಪದ ಕಲಾವಿದ ಗವಿಶಿದ್ದಯ್ಯ ಹಳ್ಳಿಕೇರಿಮಠ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದಿನ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಬೆನ್ನು ಹತ್ತಿರುವುದರಿಂದ ಈ ಕಲೆಯನ್ನು ಉಳಿಸಿ-ಬೆಳೆಸಲು ಸರಕಾರ ಜಾನಪದ ಕಲಾವಿದರಿಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳಿಂದ ವಿದ್ಯಾರ್ಥಿ ಗೌರಮ್ಮ ಓದುಸಮಠ ನಿರ್ದೇಶನದ `ವೀರ ಅಭಿಮನ್ಯು ಮಹಾಭಾರತದ ಕುರುಕ್ಷೇತ್ರ ಯುದ್ಧ’ ಕಿರು ನಾಟಕ ಪ್ರದರ್ಶನವು ಜನಮನ ಸೆಳೆಯಿತು. ತಳಕಲ್ಲ ಗ್ರಾಮದ ಮಲ್ಲಯ್ಯ ಸರಗಣಾಚಾರಿ ಅವರ ಪುತ್ರಿ ಆರಾಧ್ಯಳ ಪ್ರಥಮ ವರ್ಷದ ಜನ್ಮದಿನಾಚರಣೆಯನ್ನು ಶ್ರೀ ಮಠದಿಂದ ಆಚರಿಸಲಾಯಿತು.
ಕೊಟ್ರಯ್ಯ ಹಿರೇಮಠ, ರವೀಂದ್ರ ಉಳ್ಳಾಗಡ್ಡಿ, ಬಸಪ್ಪ ಬೇವೂರು, ಶಿವಕುಮಾರಸ್ವಾಮಿ ಮಜ್ಜಿಗುಡ್ಡ ಉಪಸ್ಥಿತರಿದ್ದರು. ಕೆ.ಬಿ. ವೀರಾಪೂರ, ನಾಗೇಂದ್ರ ಅರ್ಕಸಾಲಿ ಸಂಗೀತ ಸೇವೆ ನೀಡಿದರು. ಮುಖ್ಯೋಪಾಧ್ಯಾಯ ಕೆ.ಬಿ. ಕೊಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಿದ್ದಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ವೆಂಕಟೇಶ ಜುಂಜಣಿ ನಿರೂಪಿಸಿದರು. ಶಿಕ್ಷಕ ಕೆ.ಆರ್. ಕೋರಿ ವಂದಿಸಿದರು.