ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ದೇಸಾಯಿಬಣ ವ್ಯಾಪ್ತಿಯ ಹಳೇ ಅಣ್ಣಿಗೇರಿ ರೈತ ಸಂಪರ್ಕ ರಸ್ತೆಯನ್ನು ದುರಸ್ಥಿಗೊಳಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡುಬೇಕು ಎಂದು ಈ ಭಾಗದ ರೈತರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದರು.
ಈ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡ ರೈತರಾದ ಗಂಗಾಧರ ಗೋಡಿ ಮತ್ತಿತರರು, ಲಕ್ಷ್ಮೇಶ್ವರದಿಂದ ಯತ್ನಳ್ಳಿ ಮೂಲಕ ಅಣ್ಣಿಗೇರಿ ಸಂಪರ್ಕಿಸುವ ಹಳೆಯ ರಸ್ತೆ ಇದಾಗಿತ್ತು. ಪರ್ಯಾಯ ಮಾರ್ಗ ನಿರ್ಮಾಣವಾಗಿದ್ದರಿಂದ ಇದು ಕೇವಲ ರೈತ ಸಂಪರ್ಕ ರಸ್ತೆಯಾಗಿ ಉಳಿಯಿತು. ಅಲ್ಲಿಂದ ಈ ರಸ್ತೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಯಿತು. ಏಳೆಂಟು ವರ್ಷಗಳ ಹಿಂದೆ ರಾಮಕೃಷ್ಣ ದೊಡ್ಡಮನಿ ಶಾಸಕರಾಗಿದ್ದ ವೇಳೆ ಈ ರೈತ ಸಂಪರ್ಕ ರಸ್ತೆಯನ್ನು ದುರಸ್ಥಿಗೊಳಿಸಲಾಗಿತ್ತು. ಆದರೆ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ಮಳೆಗೆ ಈ ರಸ್ತೆಯಲ್ಲಿ ಹತ್ತಾರು ಕಂದಕಗಳುಟಾಗಿವೆ.
2 ಕಡೆ ಪೈಪ್ ಅಳವಡಿಸಿರುವ ಕಿರು ಸೇತುವೆ ಕಿತ್ತಿವೆ. ರಸ್ತೆಗೆ ಹೊಂದಿಕೊಂಡಿದ್ದ ಕೆರೆ ಒಡೆದು ಸಂಪರ್ಕ ಬಹುತೇಕ ಕಡಿತಗೊಂಡಿದೆ. ರಸ್ತೆಯ ಎರಡೂ ಬದಿ ಜಾಲಿಕಂಟಿ ಬೆಳೆದು ರಸ್ತೆಯೇ ಮಾಯವಾದಂತಾಗಿದೆ.
ಆದರೆ ಸಾವಿರಾರು ಎಕರೆ ಜಮೀನುಗಳಿಗೆ ಸಂಪರ್ಕ-ಆಧಾರವಾಗಿರುವ ಈ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಕೃಷಿ ಚಟುವಟಿಕೆಗಳಿಗೆ ರೈತರು ನಿತ್ಯ ಪರದಾಡುತ್ತಿದ್ದಾರೆ. ಮಳೆಗಾಲದಲ್ಲಂತೂ ರೈತರ ಪರಿಸ್ಥಿತಿ ಹೇಳತೀರದಾಗಿದೆ. ಈ ರಸ್ತೆ ದುರಸ್ಥಿಗೊಳಿಸುವಂತೆ ಈ ಭಾಗದ ಸಂಸದರು, ಶಾಸಕರು, ತಹಸೀಲ್ದಾರರು ಸೇರಿ ಅನೇಕರಿಗೆ ಮನವಿ ಮಾಡುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ.
ರೈತರಾದ ಶಿವಪ್ಪ ಮೆಕ್ಕಿ, ಮಂಜುನಾಥ ಕಮತದ, ಇಮಾಮಸಾಬ ಹೊಸಮನಿ, ಈರಣ್ಣ ಮಡಿವಾಳರ, ಬಸವರಾಜ ಮಡಿವಾಳರ, ಬಸಣ್ಣ ಕಮತದ, ಬಸವರಾಜ ಗೋಡಿ, ಗದಿಗೆಪ್ಪ ಗೋಡಿ, ಶಂಕರಪ್ಪ ಗೋಡಿ, ವೀರನಗೌಡ ಪಾಟೀಲ, ಡಿ.ಎಸ್. ಬೆಲ್ಲದ, ಸೋಮನಗೌಡ ಪಾಟೀಲ, ಶಿವನಗೌಡ ಕಟ್ಟಿ, ಬಸನಗೌಡ ಅಡರಕಟ್ಟಿ, ಬಣಗಾರ, ಮಲ್ಲಪ್ಪ ಶರಸೂರಿ, ವೈ.ಎಸ್. ರಾಯಚೂರ ಸೇರಿ ಹಲವರಿದ್ದರು.
ಕ್ಷೇತ್ರದ ನೂತನ ಶಾಸಕರು, ಸಂಸದರು, ಸಚಿವರು, ಅಧಿಕಾರಿಗಳಾದರೂ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಇಲ್ಲದಿದ್ದರೆ ಈ ಭಾಗದ ರೈತರು ಎತ್ತು-ಚಕ್ಕಡಿ ಸಮೇತ ತಹಸೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದರು.