ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ರಂಭಾಪುರಿ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ `ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ 2024′ ದೊರಕಿದೆ.
ಚಿಕ್ಕಬಳ್ಳಾಪೂರ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿಯನ್ನು ಕೊಡಮಾಡುತ್ತಿದ್ದು, ಈ ಬಾರಿ ಪಟ್ಟಣದ ಈ ಶಾಲೆ ಪ್ರಶಸ್ತಿಗೆ ಭಾಜನವಾಗಿದೆ.
ಪ್ರಶಸ್ತಿಯು 10 ಸಾವಿರ ರೂ.ಗಳ ನಗದು ಹಾಗೂ ಪಾರಿತೋಷಕ ಒಳಗೊಂಡಿದೆ. ಪ್ರಶಸ್ತಿ ವಿತರಣೆ ಕಾರ್ಯಕ್ರಮವು ಜುಲೈ 27ರಂದು ಚಿಕ್ಕಬಳ್ಳಾಪೂರದ ಸತ್ಯಸಾಯಿ ಗ್ರಾಮ ಮುದ್ದೇನಹಳ್ಳಿಯಲ್ಲಿ ಜರುಗಲಿದೆ.
ಪಟ್ಟಣದ ರಂಭಾಪುರಿ ಶಾಲೆ ಒಟ್ಟು 1 ಎಕರೆ ವಿಶಾಲವಾದ ಜಾಗವನ್ನು ಹೊಂದಿದ್ದು, ಅರಣ್ಯ ಇಲಾಖೆಯ ಸಹಾಯದಿಂದ ನೂರಾರು ಗಿಡಮರಗಳನ್ನು ಬೆಳೆಸಲಾಗಿದೆ. ಬೋಧನೆ ಹಾಗೂ ಕಲಿಕೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ. 2023-24ನೇ ಸಾಲಿನಲ್ಲಿ ಪ್ರತಿಭಾ ಕಾರಂಜಿಯಲ್ಲಿ ಹಲವು ಪ್ರಶಸ್ತಿಗಳು ಈ ಶಾಲೆಗೆ ದೊರೆತಿವೆ.
ಹಸಿರು ನೈರ್ಮಲ್ಯ ಅಭ್ಯುಧಯ ಶಾಲಾ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ ನಿಮಿತ್ತ ಇತ್ತೀಚೆಗೆ ಶ್ರೀ ಸಾಯಿ ಅನ್ನಪೂರ್ಣ ಟ್ರಸ್ಟ್ನವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ಖಂಡೋಜಿಯವರು ನೀಡಿದ ಎರಡು ತೆಂಗಿನ ಸಸಿಗಳನ್ನು ಟ್ರಸ್ಟ್ನ ಸಂತೋಷ್ ಅಲ್ಲತ್ ಹಾಗೂ ರಾಜೀವ್ ಆರ್ ನೆಟ್ಟು ಶಾಲೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.
ಮುಖ್ಯ ಶಿಕ್ಷಕಿ ಜೆ.ಎಫ್. ಹಬೀಬ, ಸಹ ಶಿಕ್ಷಕಿ ನಿರ್ಮಲಾ ಎನ್ ಮತ್ತು ಮಾರ್ಗದರ್ಶನ ನೀಡಿದ ಸಿಆರ್ಪಿ ಸತೀಶ ಬೊಮಲೆ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ ಅಭಿನಂದಿಸಿದ್ದಾರೆ.
ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಉತ್ತಮ 100 ಸರಕಾರಿ ಶಾಲೆಗಳಿಗೆ ರಾಜ್ಯ ಮಟ್ಟದಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಪ್ರೋತ್ಸಾಹದಾಯಕವಾಗಿದೆ. ನಮ್ಮ ಶಾಲೆ ಈ ಪ್ರಶಸ್ತಿಗೆ ಆಯ್ಕೆ ಆಗಿದ್ದು ಸಂತಸ ತಂದಿದೆ
– ಶಿವಯ್ಯ ಕುಲಕರ್ಣಿ.
ಎಸ್ಡಿಎಂಸಿ ಅಧ್ಯಕ್ಷ.