ಬೆಳಗಾವಿ, ಜುಲೈ 20: ಬೆಳಗಾವಿಯ ಜಾಂಬೋಟಿ, ಚೋರ್ಲಾದಲ್ಲಿ ಹಲವು ಸೇತುವೆಗಳು ನಿರಂತರ ಮಳೆಯಿಂದಾಗಿ ಶಿಥಿಲಗೊಂಡ ಹಿನ್ನೆಲೆ ಬೆಳಗಾವಿಯಿಂದ ಗೋವಾ ಸಂಚರಿಸುವ ಭಾರಿ ವಾಹನಗಳ ಚಾಲಕರಿಗೆ ಬದಲಿ ಮಾರ್ಗ ಸೂಚಿಸಲಾಗಿದೆ. ಬೆಳಗಾವಿಯಿಂದ ತೆರಳುವವರು ಪೀರನವಾಡಿಯಿಂದ ಎಡಕ್ಕೆ ತಿರುವು ಪಡೆದುಕೊಂಡು, ಖಾನಾಪುರ ಮಾರ್ಗವಾಗಿ ಗೋವಾಗೆ ಹೋಗುವಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದ ಹಿನ್ನೆಲೆಯಲ್ಲಿ ನಿಪ್ಪಾಣಿ ತಾಲೂಕಿನ ಹಲವು ಗ್ರಾಮಗಳಿಗೆ ನೆರೆಯ ಆತಂಕ ಶುರುವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಕಾರದಗಾ ಗ್ರಾಮ ಹೊರವಲಯದಲ್ಲಿರುವ ಬಂಗಾಲಿಬಾಬಾ ದರ್ಗಾವನ್ನು ನೀರು ಸುತ್ತುವರೆದಿದೆ. ನೀರು ಇನ್ನೂ ಏರಿಕೆಯಾದರೆ ನದಿ ನೀರು ಗ್ರಾಮಕ್ಕೆ ನುಗ್ಗುವ ಸಾಧ್ಯತೆ. ಬೆಳಗಾವಿಯ ಹೊಲ ಗದ್ದೆಗಳಿಗೆ ಬಳ್ಳಾರಿ ನಾಲೆ ನುಗ್ಗಿ ಅವಾಂತರ ಸೃಷ್ಟಿಸಿಯಾಗಿದೆ.
ಇನ್ನೂ ಉಡುಪಿ ಜಿಲ್ಲೆ ಮತ್ತು ಕರಾವಳಿ ಪ್ರಾಂತ್ಯದ ಜನರಿಗೆ ಡಬಲ್ ಸಂಕಷ್ಟ ಎದುರಾಗಿದೆ. ಕಳೆದ ಎರಡು ವಾರಗಳಿಂದ ಈ ಭಾಗಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ ಮತ್ತು ಈಗ ಅರಬ್ಬೀ ಸಮುದ್ರದ ಮೇಲೆ ವಾಯಭಾರ ಕುಸಿತ ಉಂಟಾಗಿರುವುದರಿಂದ ರಾಕ್ಷಸ ಗಾತ್ರದ ಅಲೆಗಳು ಸೃಷ್ಟಿಯಾಗಿ ಕಡಲ್ಕೊರತದ ಸಮಸ್ಯೆ ಎದುರಾಗಿದೆ ಮತ್ತು ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಿದೆ.
ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿರುವ ಕಾರಣ ತೀರದಲ್ಲಿದ್ದ ತೆಂಗಿನ ಮರಗಳು ನೆಲಕ್ಕುರುಳಿವೆ. ಕಡಲ್ಕೊರೆತವನ್ನು ತಡೆಯಲೆಂದು ನಿರ್ಮಿಸಲಾಗಿದ್ದ ತಡಗೋಡೆಗಳು ಅಲೆಗಳ ರಭಸಕ್ಕೆ ದ್ವಂಸಗೊಂಡಿವೆ. ಸಮುದ್ರದ ಪ್ರಕ್ಷುಬ್ದತೆ ತೀರದಲ್ಲಿ ವಾಸಿಸುವ ಜನರನ್ನು ಆತಂಕಕ್ಕೀಡು ಮಾಡಿದೆ. ಕಡಲ್ಕೊರತದಿಂದ ಆಗುತ್ತಿರುವ ಹಾನಿಯನ್ನು ತಡೆಯಲು ಶಾಶ್ವತ ಪರಿಹಾರದ ಯೋಜನೆ ರೂಪಿಸುವಂತೆ ಅವರು ಸರ್ಕಾರಕ್ಕೆ ನೀಡಿರುವ ಮನವಿಗಳು ಸಮುದ್ರ ಅಲೆಗಳ ಜೊತೆ ಕೊಚ್ಚಿಹೋಗಿವೆ. ಇನ್ನೂ 4-5 ದಿನಗಳ ಕಾಲ ಮಳೆ ಸುರಿಯಲಿರುವುದರಿಂದ ಸಮುದ್ರ ತೀರಕ್ಕಿರುವ ಜನ ಜಾಗ್ರತೆಯಿಂದ ಇರುವಂತೆ ಮತ್ತು ಮೀನುಗಾರರು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಎಚ್ಚರಿಸಿದೆ.