ವಿಜಯಸಾಕ್ಷಿ ಸುದ್ದಿ, ನರೇಗಲ್ : ಜಗತ್ತಿನಲ್ಲಿರುವ ಪ್ರತೀ ವ್ಯಕ್ತಿಗೂ ತಾಯಿಯೇ ಮೊದಲ ಗುರುವಾಗಿದ್ದಾಳೆ. ಆದ್ದರಿಂದ ಮೊದಲ ಪೂಜೆ ತಾಯಿಗೆ ಸಲ್ಲಬೇಕು. ಗುರುಪೂರ್ಣಿಮೆಯ ಈ ದಿನದಂದು ನಾವು ತಾಯಂದಿರನ್ನು ನೆನೆಸಿಕೊಂಡು ನಂತರ ಕಲಿಸಿದ ಗುರುವಿಗೆ ನಮ್ಮ ನಮನಗಳನ್ನು ಸಲ್ಲಿಸಬೇಕೆಂದು ಡಾ. ಕೆ.ಬಿ. ಧನ್ನೂರ ಹೇಳಿದರು.
ಪಟ್ಟಣದ ಶ್ರೀ ಮಂಜುನಾಥ ಪ್ರಾಥಮಿಕ (ಅಪ್ಪಣ್ಣವರ) ಶಾಲೆಯಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗೆ ಮುಂದೆ ಗುರಿ, ಹಿಂದೆ ಗುರು ಇದ್ದರೆ ಯಶಸ್ಸು ಸಾಧ್ಯ. ಅದಕ್ಕಾಗಿ ಎಲ್ಲ ವಿದ್ಯಾರ್ಥಿಗಳು ಛಲ ಬಿಡದೆ ಸತತ ಪ್ರಯತ್ನದಿಂದ ಅಭ್ಯಾಸ ಮಾಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಗುರಿ ಏನೆಂಬುದನ್ನು ಇಟ್ಟುಕೊಂಡು ಮುನ್ನಡೆಯಬೇಕು. ಯಾವ ಗುರಿ ಇಟ್ಟುಕೊಂಡಿದ್ದೇವೆ ಎಂಬುದರ ಕುರಿತು ಕನಸನ್ನು ಕಾಣುತ್ತಿದ್ದರೆ ಅದು ನನಸಾಗುವದರಲ್ಲಿ ಸಂಶಯವಿಲ್ಲ ಎಂದರು.
ಸಂಸ್ಥೆಯ ಅಧ್ಯಕ್ಷೆ ನೇತ್ರಾ ಅಪ್ಪಣ್ಣವರ ಮಾತನಾಡಿ, ನಿಜವಾದ ಶಿಕ್ಷಕ ಜ್ಞಾನವನ್ನು ಸಂಗ್ರಹಿಸಿ ಅದನ್ನು ಮಕ್ಕಳ ಹೃದಯದಲ್ಲಿ ತುಂಬುವ ಮಹಾನ್ ಸಾಧಕ. ಅಂತಹ ನಿಜವಾದ ಗುರುಗಳನ್ನು ಹಾಗೂ ಜ್ಞಾನವನ್ನು ಪಡೆದ ನೀವು ಧನ್ಯರು. ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಸಾಧನೆ ಮಾಡಿ ಅವರ ಸಾಧನೆಗೆ ಬೆನ್ನೆಲುಬಾದ ಶಿಕ್ಷಕರನ್ನು ನೆನೆಯುವ ಕ್ಷಣ ಅವಿಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ ಪಾಲಕರಾದ ಸಂಗನಗೌಡ ಚನ್ನಪ್ಪಗೌಡ್ರ, ರೇವಣೆಪ್ಪ ಯಲಬುರ್ಗಿ, ರಘುನಾಥ ಕೊಂಡಿ, ಹಟೇಸ್ಸಾಬ್ ಲತೀಫ್ಸಾಬನವರ, ಶಿಕ್ಷಕರಾದ ಸುಜಾತಾ ಚಿಂಚಲಿ, ಶಹಜಾನ್ಬೆಗಂ ದರಗಾದ, ಸ್ನೇಹಲತಾ ಸಾಲಿಮಠ, ಸೀಮಾ ಕೊಂಡಿ ಮುಂತಾದವರಿದ್ದರು.