ತಪ್ಪು ಮಾಹಿತಿ ನೀಡಿದರೆ ಕ್ರಮ ಎದುರಿಸಿ : ವಿಜಯ ಬಿರಾದಾರ

0
Face action if wrong information is provided
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ಗುರುವಾರ ದಿಢೀರ್ ಭೇಟಿ ನೀಡಿ, ವಿಲೇವಾರಿಯಾಗದ ಕಡತಗಳ ಪರಿಶೀಲನೆ, ಜನನ-ಮರಣ ಮಾಹಿತಿ ಸೇರಿದಂತೆ ಪುರಸಭೆ ಆವರಣದಲ್ಲಿ ನಿಂತಿದ್ದ ವಾಹನಗಳ ಪರಿಶೀಲನೆ, ಮಳಿಗೆಗಳ ಬಗ್ಗೆ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಮಾಹಿತಿ ಪಡೆದರು.

Advertisement

ಪಟ್ಟಣದ ಪುರಸಭೆ ಆವರಣದಲ್ಲಿ ನಿಂತಿದ್ದ ವಾಹನಗಳ ಪರಿಶೀಲನೆ ವೇಳೆ ಪುರಸಭೆಯ ವಾನಹಗಳು ಸುಸ್ಥಿತಿಯಲ್ಲಿರುವುದರ ಜತೆಗೆ ಚಾಲಕರು ಕಡ್ಡಾಯವಾಗಿ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು. ಕೆಟ್ಟು ನಿಂತಿದ್ದ ವಾಹನಗಳನ್ನು ಗುಜರಿಗೆ ಹಾಕುವ ಮುನ್ನ ಆರ್‌ಟಿಒ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸಕಾಲದಲ್ಲಿ ಅವಧಿ ಮೀರಿದರೂ ಸಹ ಕಡತಗಳ ವಿಲೇವಾರಿ ಆಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ತ್ವರಿತಗತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಸಾರ್ವಜನಿಕರು ಸಮಸ್ಯೆಗಳ ಪರಿಹಾರಕ್ಕೆ ಅಲೆಯದಂತೆ ಕರ್ತವ್ಯ ನಿರ್ವಹಿಸಿ ಎಂದು ಸೂಚಿಸಿದರು.

ಪಟ್ಟಣದಲ್ಲಿ ನಿರ್ಮಾಣವಾಗುವ ಬಡಾವಣೆಯಲ್ಲಿ ನಿವೇಶನಗಳ ಮಾರಾಟ ಮಾಡಲು ಕಡ್ಡಾಯವಾಗಿ ವಿದ್ಯುತ್ ಕಂಬ, ಚರಂಡಿ ನೀರಿನ, ನೀರಿನ ಸಂಪರ್ಕ ಸೇರಿ ಅಗತ್ಯ ಮೂಲಸೌಕರ್ಯಗಳು ಹೊಂದಿರಬೇಕು. ಹೀಗಾಗಿ ಪಟ್ಟಣದಲ್ಲಿನ ಒಟ್ಟು ಬಡಾವಣೆಗಳ ಮಾಹಿತಿ ಹಾಗೂ ಅಭಿವೃದ್ಧಿ ಹೊಂದದ ಸಮಗ್ರ ಮಾಹಿತಿಯನ್ನು ನೀಡುವುದರ ಜತೆಗೆ ಯಾವ ವರ್ಷದಲ್ಲಿ ಎಷ್ಟು ನಿವೇಶನಗಳ ಮಾರಾಟವಾಗಿದೆ, ಅಧಿಕಾರಿಗಳು ಯಾರಿದ್ದರು ಎಂಬ ಕುರಿತ ಲಿಖಿತ ಮಾಹಿತಿಯನ್ನು ಕಚೇರಿಗೆ ರವಾನಿಸಬೇಕು. ಅಧಿಕಾರಿಗಳು ನೀಡುವ ಮಾಹಿತಿ ಬಗ್ಗೆ ಸಾರ್ವಜನಿಕರಿಂದ ಲೋಕಾಯುಕ್ತ ಕಚೇರಿಯಿಂದ ಪರಿಶೀಲನೆ ನಡೆಸಿದಾಗ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದು ತಿಳಿದುಬಂದರೆ ಕಾನೂನಿನ ಕ್ರಮವನ್ನು ಎದುರಿಸಲು ಪುರಸಭೆ ಅಧಿಕಾರಿಗಳು ಸಿದ್ಧವಾಗಿರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಟ್ಟಣದ ಘನತ್ಯಾಜ್ಯ ಘಟಕಕ್ಕೆ ಭೇಟಿ ನೀಡಿದ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ, ಘಟಕಕ್ಕೆ ಬರುವ ವಾಹನಗಳ ಮಾಹಿತಿ ನೋಂದಣಿ ಪುಸಕ್ತದ ಬಗ್ಗೆ ವಿಚಾರಿಸಿದರು. ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಜತೆಗೆ ಪುರಸಭೆಗೆ ಆದಾಯ ಬರುವ ನಿಟ್ಟಿನಲ್ಲಿ ಕೆಲಸವನ್ನು ನಿರ್ವಹಿಸಬೇಕು. ಮುಕ್ತಿ ವಾಹನದ ಬಾಡಿಗೆ ಎಷ್ಟು, ಮೇ ಹಾಗೂ ಜೂನ್ ತಿಂಗಳಲ್ಲಿ ಎಷ್ಟು ಬಾರಿ ಹೋಗಿದೆ ಎಂಬುದುರ ಮಾಹಿತಿ ಕೇಳಿದಾಗ ಪುರಸಭೆ ಅಧಿಕಾರಿಗಳು ನಿರುತ್ತರರಾದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಲೋಕಾಯುಕ್ತ ಡಿವೈಎಸ್ಪಿ, ಮುಕ್ತಿ ವಾಹನಕ್ಕೆ ಪುರಸಭೆ ಅಧಿಕಾರಿಗಳ ದೂರವಾಣಿ ಸಂಖ್ಯೆ ಹಾಗೂ ಮುಕ್ತಿ ವಾಹನದ ಬಗ್ಗೆ ಪ್ರಚಾರ ಮಾಡಿ ಎಂದರು.

ಇದಕ್ಕೂ ಮುನ್ನ ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ವಿವಿಧ ಕಡತಗಳ ಪರಿಶೀಲನೆ ಜತೆಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು, ಗ್ರಾಮಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಹಾಗೂ ಸಾರ್ವಜನಿಕರು ನೀಡುವ ಮಾಹಿತಿಗೆ ತಾ.ಪಂ ಅಧಿಕಾರಿಗಳು ಸ್ಪಂದಿಸಿ ಪರಿಹಾರ ಒದಗಿಸಲು ಮುಂದಾಗಬೇಕು ಎಂದರು.


Spread the love

LEAVE A REPLY

Please enter your comment!
Please enter your name here