ವಿಜಯಸಾಕ್ಷಿ ಸುದ್ದಿ, ನರೇಗಲ್ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೀದಿಬದಿ ವ್ಯಾಪಸ್ಥರ ಕ್ಷೇಮಾಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ನರೇಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಹೊಸಮನಿ ಹೇಳಿದರು.
ಅವರು ಪಟ್ಟಣ ಪಂಚಾಯಿತಿ ವತಿಯಿಂದ ಬೀದಿ ಬದಿ ವ್ಯಾಪಾರಸ್ಥರ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೀದಿಬದಿ ವ್ಯಾಪಾರಿಗಳು ಅನೌಪಚಾರಿಕ ಅರ್ಥ ವ್ಯವಸ್ಥೆಯ ಪಿರಮಿಡ್ನ ತಳದಲ್ಲಿ ಒಂದು ಮುಖ್ಯ ಭಾಗವಾಗಿದ್ದಾರೆ. ಬೀದಿ ವ್ಯಾಪಾರವು ಸ್ವ-ಉದ್ಯೋಗದ ಒಂದು ಮೂಲವಾಗಿದೆ. ನಗರದ ಸರಬರಾಜು ಸರಣಿಯಲ್ಲಿ ಬೀದಿ ವ್ಯಾಪಾರವು ಒಂದು ಮಹತ್ವದ ಸ್ಥಾನ ಪಡೆದುಕೊಂಡಿದೆ. ಇದು ಬಡವರೂ ಸೇರಿದಂತೆ ಜನಸಂಖ್ಯೆಯ ಎಲ್ಲ ಭಾಗಗಳಿಗೂ ದುಬಾರಿಯಲ್ಲದ ಮತ್ತು ಅನುಕೂಲಕರವಾಗಿ ಸರಕುಗಳು ಮತ್ತು ಸೇವೆಗಳು ಲಭ್ಯವಾಗುವುದಕ್ಕೆ ಅವಕಾಶ ಕಲ್ಪಿಸುತ್ತದೆ. ಬೀದಿ ಬದಿ ವ್ಯಾಪಾರಸ್ಥರ ಸರ್ವೆ ಕಾರ್ಯ ಮುಗಿದ ನಂತರ ಎಲ್ಲರಿಗೂ ಗುರುತಿನ ಚೀಟಿ ವಿತರಿಸಲಾಗುತ್ತದೆ. ವ್ಯಾಪಾರ ವೃದ್ಧಿಗಾಗಿ ವಿಶೇಷ ತರಬೇತಿ ಸೇರಿದಂತೆ ಸಾಲ ಸೌಲಭ್ಯಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮುದಾಯ ಸಂಘಟಕ ವಿ.ವೈ. ಮಡಿವಾಳರ, ಸಿಆರ್ಪಿ ಅಶ್ವಿನಿ ಹಿರೇಮಠ, ಶಂಕ್ರಪ್ಪ ದೊಡ್ಡಣ್ಣವರ, ಆರಿಫ್ ಮಿರ್ಜಾ, ರಮೇಶ ಹಲಗಿ, ಟಿವಿಸಿ ಕಮಿಟಿ ಸದಸ್ಯರಾದ ವೀರಪ್ಪ ಹುರಕಡ್ಲಿ, ಶಿವಾನಂದ ಪದ್ಮಸಾಲಿ, ಶಿವು ಮುಳಗುಂದ, ದ್ಯಾಮಪ್ಪ ಕಡೆತೋಟದ, ದೇವಕ್ಕ ರಾಠೋಡ ಮುಂತಾದವರಿದ್ದರು.