ಮಂಡ್ಯ: ಇಂದಿನಿಂದ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮೆ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಮಂಡ್ಯದ ಜನಾಂದೋಲನದಲ್ಲಿ ಮಾತನಾಡಿದ ಅವರು, ತಾಂತ್ರಿಕ ಕಾರಣದಿಂದ ಹಣ ಬಂದಿರಲಿಲ್ಲ. ಇಂದಿನಿಂದ ಜೂನ್, ಜುಲೈ ತಿಂಗಳ ಹಣ ಖಾತೆಗೆ ಜಮೆಯಾಗಲಿದೆ. ನುಡಿದಂತೆ ನಡೆಯುವವರು ಕಾಂಗ್ರೆಸ್ನವರು. ನಮಗೆ ಸಿಕ್ಕ ಅಧಿಕಾರದಲ್ಲಿ ಜನರಿಗೆ ಒಳ್ಳೆಯದು ಮಾಡುತ್ತೇವೆ. ಬರಗಾಲದಲ್ಲಿ ಪರಿಹಾರ ಕೊಡಲು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮನಸ್ಸಿಲ್ಲ. ಆದರೆ ಬಿಜೆಪಿ ಭ್ರಷ್ಟ ಸರ್ಕಾರ ಬಂಡವಾಳಶಾಹಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಎಂದು ಕಿಡಿಕಾರಿದರು.
ಇನ್ನೂ ಪೆನ್ ಡ್ರೈವ್ ಹಂಚುವ ಮೂಲಕ ದೇವೇಗೌಡರ ಕುಟುಂಬಕ್ಕೆ ವಿಷ ಹಾಕಿದ್ದಾರೆ ಅಂತಿರಲ್ಲಾ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಕುಟುಂಬ ಒಂದು ಕುಟುಂಬ ಅಲ್ವಾ? ನಿಮಗೆ ನಾಚಿಗೆ ಆಗಲ್ವಾ? ಪೆನ್ಡ್ರೈವ್ ಹಂಚಿದ್ದು ಪ್ರೀತಂಗೌಡ ಅಂತ ತಾವೇ ಒಪ್ಪಿಕೊಂಡ್ರಲ್ಲ. ಕುಮಾರಣ್ಣ ದೇವೇಗೌಡರ ಕುಟುಂಬಕ್ಕೆ ವಿಷ ಎರೆದರು ಅಂತೀರಾ. ಆದರೆ ದೌರ್ಜನ್ಯಕ್ಕೊಳಗಾದ ಮಹಿಳೆಯರ ಕುಟುಂಬ, ಕುಟುಂಬ ಅಲ್ವಾ? ನೂರಾರು ಮಹಿಳೆಯರ ಮರ್ಯಾದೆ ಬೀದಿ ಪಾಲು ಆಯ್ತಲ್ಲಾ, ನಿಮಗೆ ನಾಚಿಕೆ ಆಗಲ್ವಾ? ಜನಪ್ರತಿನಿಧಿ ಆಗಲು ನಿಮಗೆ ಯಾವ ನೈತಿಕತೆ ಇದೆ? ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.