ಬೆಂಗಳೂರು:- ಹೆಮ್ಮೆಯ ಸ್ವಾತಂತ್ರ್ಯ ದಿನದಂದು ಪ್ರತಿಭಟನೆ ಕೈಬಿಡಿ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಎಸ್ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಆಗಸ್ಟ್ 15ರಂದು ಕರಾಳ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಕೆಲವು ಸಂಘಟನೆಗಳು ಮುಂದಾಗಿದೆ. ಹೀಗಾಗಿ ಈ ಕುರಿತಾಗಿ ಎಸ್ ಸುರೇಶ್ ಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ಈ ಸಂಘಟನೆಗಳು ಬಿಡುಗಡೆ ಮಾಡಿರುವ ಹೇಳಿಕೆಗಳನ್ನು ಗಮನಿಸಿದ್ದೇನೆ. ಇವರ ಸಮಸ್ಯೆ, ಪರಿಹಾರಕ್ಕಾಗಿ ಆಗ್ರಹ ಎಲ್ಲವೂ ಸಮ್ಮತವೇ. ಆದರೆ ಇವರು ಪ್ರತಿಭಟನೆಗಾಗಿ ಆಯ್ಕೆ ಮಾಡಿಕೊಂಡಿರುವ ದಿನಾಂಕವನ್ನು ಸ್ವಾತಂತ್ರ್ಯವನ್ನು ಪ್ರೀತಿಸುವ ಯಾರೇ ಆದರೂ ಒಪ್ಪತಕ್ಕದಂತದ್ದಲ್ಲ.
ನಮ್ಮ ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆಗಳಿಗೆ ಪೂರ್ಣ ಅವಕಾಶ ಇದೆ. ಒಂದು ರೀತಿಯಿಂದ ಈ ರೀತಿಯ ಪ್ರತಿಭಟನೆ ಹೋರಾಟಗಳ ಮೂಲಕವೇ ನಾವು ಬ್ರಿಟಿಷರಿಂದ ಮುಕ್ತಿ ಪಡೆದು ಆಗಸ್ಟ್ 15 ರಂದು ಸ್ವಾತಂತ್ರ್ಯಗಳಿಸಿದ್ದು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕ, ಸಂಘಟನೆ-ಸಮುದಾಯ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟನೆಯ ಮಾರ್ಗ ಹಿಡಿಯುವುದು ಸಹಜ ಪ್ರಕ್ರಿಯೆ. ಆದರೆ ಈ ಪ್ರತಿಭಟನೆಗಳು ದೇಶದ ಆಶಯಗಳ ಮೂಲ ಸ್ವರೂಪಕ್ಕೆ ಧಕ್ಕೆ ತರುವಂತದ್ದಾಗಿರಬಾರದು. ಪ್ರತಿಭಟನೆಯ ಸಮಯ-ಸಂದರ್ಭಗಳು ಬಹಳ ಮುಖ್ಯವಾಗುತ್ತವೆ.
ತಾವು ಕೈಗೊಳ್ಳಲಿರುವ ಪ್ರತಿಭಟನೆ ಪರಿಣಾಮ ಯಾರ ಮೇಲೆ ಹೇಗೆ ಆಗಬಹುದು ಎಂಬ ವಿವೇಚನೆ ಪ್ರತಿಭಟನೆಯ ನೇತಾರರಿಗೆ ಇರಬೇಕು. ತಮ್ಮ ಪ್ರತಿಭಟನೆ ನಮ್ಮ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಉಂಟುಮಾಡುತ್ತದೆ ಎಂಬುದರ ಅರಿವಿರಬೇಕು.
ರಾಜ್ಯದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾಗಿರುವುದು ಅತ್ಯಗತ್ಯ. ಅವರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ, ವಸ್ತುನಿಷ್ಠ ಪರಿಹಾರವನ್ನು ಹುಡುಕಬೇಕಾಗಿದೆ. ಸರ್ಕಾರಗಳು ಈ ಕುರಿತು ಈ ಹಿಂದೆಯೂ ಪ್ರಯತ್ನವನ್ನು ಮಾಡಿವೆ.
ಈಗಲೂ ಮಾಡಬೇಕಿದೆ. ಈ ಸಮಸ್ಯೆಗಳು ಎಷ್ಟು ಬೇಗ ಪರಿಹಾರವಾದರೆ, ಅಷ್ಟು ಬೇಗ ಒಳಿತಾಗುತ್ತದೆ. ಖಾಸಗಿ ಶಾಲೆಗಳು ತಮ್ಮದೇ ಆದ ರೀತಿಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಕೊಡುಗೆ ನೀಡುತ್ತಿರುವುದು ನಿರ್ವಿವಾದ ಸಂಗತಿ.
ಆದರೆ ಸ್ವಾತಂತ್ರ್ಯ ದಿನೋತ್ಸವದಂದು ಪ್ರತಿಭಟನೆಯ ದಿನವನ್ನಾಗಿ ಆಚರಿಸಲು ಆಯ್ದುಕೊಂಡಿರುವುದು ಯಾರು ಒಪ್ಪಲಾಗದ ಸಂಗತಿ.
ಸ್ವಾತಂತ್ರ್ಯ ದಿನ ವನ್ನು ಸಂಭ್ರಮದಿಂದ ಆಚರಿಸುತ್ತಾ, ಮಕ್ಕಳಲ್ಲಿ-ಯುವ ಜನಾಂಗದಲ್ಲಿ ನಮ್ಮ ದೇಶದ ಕುರಿತು ಹೆಮ್ಮೆ, ಅಭಿಮಾನ, ಉತ್ಸಾಹ, ಆದರ್ಶಗಳನ್ನು ತುಂಬಬೇಕಾದ ಶಿಕ್ಷಣ ಸಂಸ್ಥೆಗಳೇ ಸ್ವಾತಂತ್ರ್ಯ ದಿನವನ್ನು ಪ್ರತಿಭಟನಾ ದಿನವನ್ನಾಗಿ ಆಚರಿಸಲು ಹೊರಟಿರುವುದು ತೀರಾ ದುರದೃಷ್ಟಕರವಾದ ಸಂಗತಿ.
ಇದು ಸಮಾಜಕ್ಕೆ ಒಟ್ಟು ತಪ್ಪು ಸಂದೇಶವನ್ನು ಹಾಗೂ ನಕರಾತ್ಮಕ ಭಾವನೆಯನ್ನು ಹರಡುತ್ತದೆ. ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಒಂದು ರೀತಿಯ ನಿರಾಶೆಯನ್ನು, ದೇಶದ ಕುರಿತು ಸಿನಿಕತನವನ್ನು ಉಂಟುಮಾಡುತ್ತದೆ.
ಆದರಿಂದ ಪ್ರತಿಭಟನೆಗೆ ಕರೆ ಕೊಟ್ಟಿರುವ ಸಂಘಟನೆಗಳ ಪ್ರಮುಖರಿಗೆಲ್ಲ ಹಾಗೂ ಖಾಸಗಿ ಶಿಕ್ಷಕರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.