ವಿಜಯಸಾಕ್ಷಿ ಸುದ್ದಿ, ಗದಗ : ಬೀಜ ಮೊಳೆತು ಫಲವಾಗಿ ಬೆಳೆಯಬೇಕಾದರೆ ಹದವಾದ ಭೂಮಿಯಲ್ಲಿ ನಾವು ಬೀಜವನ್ನು ಬಿತ್ತಬೇಕು. ಹಾಗೆಯೇ ಮಕ್ಕಳ ಮನಸ್ಸು ಹದವಾದ, ಫಲವತ್ತಾದ ಭೂಮಿಯಾಗಿದ್ದು ಜ್ಞಾನದ ಬೀಜಗಳನ್ನು, ಮೌಲ್ಯಗಳನ್ನು ನಾವು ಬಿತ್ತಿದರೆ ಮಗು ಉತ್ತಮ ಬದುಕನ್ನು ಬೆಳೆಸಿಕೊಳ್ಳಬಲ್ಲದು. ಅದಕ್ಕಾಗಿ ಶರಣರ, ದಾರ್ಶನಿಕರ ವಚನಗಳ ದಾರಿದೀಪ ಎಂದು ಚಿಂತಕಿ ಸುವರ್ಣ ವಸ್ತ್ರದ ಹೇಳಿದರು.
ಅವರು ಗದಗ ಜಿಲ್ಲಾ ಅಖಿಲ ಭಾರತ ಶರಣ ಸಂಕುಲನದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಗದುಗಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 16ರಲ್ಲಿ ಜರುಗಿದ ಶ್ರಾವಣದ ಅಮೃತ ಭೋಜನ-ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.
ಮಕ್ಕಳಿಗೆ ಬಸವಣ್ಣನವರ ವಚನ ಗಾಯನವನ್ನು ಹೇಳಿಸಿದ ಗಾಯಕಿ ಪದ್ಮಾ ಕಬಾಡಿ ಮಾತನಾಡಿ, ವಚನಗಾಯನದಲ್ಲಿ ಮಧುರತೆ ಹೆಚ್ಚು. ಮಕ್ಕಳು ಶರಣರ ವಚನಗಳನ್ನು ರಾಗಬದ್ಧವಾಗಿ ಹಾಡುವ ರೂಢಿ ಮಾಡಿದಲ್ಲಿ ಸಂಗೀತದಲ್ಲಿ ಯಶಸ್ಸು ಕಾಣಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯೆ ಎಂ.ಆರ್. ನೀಲಣ್ಣವರ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳು ಪ್ರತಿಭಾನ್ವಿತರಾಗಿದ್ದು, ಪ್ರತಿಭೆಗೆ ಪ್ರೋತ್ಸಾಹ ನೀಡುವಲ್ಲಿ ಕದಳಿಶ್ರೀ ವೇದಿಕೆಯವರು ಶಾಲೆಗಳಿಗೆ ಆಗಮಿಸಿ ಸಿಹಿಭೋಜನದೊಂದಿಗೆ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಕವಿತಾ ಕಲ್ಮನಿ ಪ್ರಾರ್ಥಿಸಿದರು. ಕೆ.ಎಸ್. ಬೇಲೇರಿ ಸ್ವಾಗತಿಸಿದರು. ಎಸ್.ವೈ. ಮರಕುಂಬಿ ನಿರೂಪಿಸಿ ವಂದಿಸಿದರು. ಯಲ್ಲಮ್ಮ ಡೊಳ್ಳಿನವರ, ಜಾಹೀದಾಬೇಗಂ ತಹಸೀಲ್ದಾರ, ರೇಣುಕಾ ಸೋಮಣ್ಣವರ, ಸಾಹೀರಾಭಾನು ಶಹಪೂರ ಮುಂತಾದವರಿದ್ದರು.
ಮುಖ್ಯ ಅತಿಥಿ ಬಾಲಕಿಯರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಸುಜಾತಾ ಪಾಟೀಲ ಮಾತನಾಡಿ, ಶಾಲೆ ಬಿಟ್ಟ ಮಕ್ಕಳು ಕಂಡುಬಂದಲ್ಲಿ ಅವರನ್ನು ಶಾಲೆಗೆ ದಾಖಲಿಸಿಕೊಳ್ಳಬೇಕು. ಅವರಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸುವ ಅವಕಾಶವಿದ್ದು, ಮಕ್ಕಳು ಅವಶ್ಯಕತೆ ಇದ್ದರೆ ಹಾಸ್ಟೆಲ್ ಸೇವೆ ಬಳಸಿಕೊಂಡು ಓದು ಮುಂದುವರೆಸಬೇಕು ಎಂದರು.
Advertisement