ಮಂಡ್ಯ:- 5 ದಿನಗಳಿಂದ ಮಂಡ್ಯದ ಮೈಶುಗರ್ ಕಾರ್ಖಾನೆ ಸ್ಥಗಿತವಾಗಿದ್ದು, ಕೆಲಸ ಇಲ್ಲದೇ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕೋಟಿಗಟ್ಟಲೇ ಅನುದಾನ ಕೊಟ್ಟರೂ ಈ ಕಾರ್ಖಾನೆಯಲ್ಲಿ ಸಮಸ್ಯೆ ಮಾತ್ರ ತಪ್ಪುತ್ತಿಲ್ಲ.
ಮುಚ್ಚಿಯೇ ಹೋಗಿದ್ದ ಕಾರ್ಖಾನೆಗೆ ಸರ್ಕಾರ ಮರು ಜೀವ ತುಂಬಿ, ಆರ್ಥಿಕ ಸಹಾಯ ನೀಡಿ, ಮತ್ತೆ ಕಾರ್ಖಾನೆ ಪುನಶ್ಛೇತನ ಮಾಡಲಾಗಿದೆ.
2024-25ನೇ ಸಾಲಿನ ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಾಗಿದ್ದು, ಆದರೆ, ಆರಂಭದಲ್ಲೇ ತಾಂತ್ರಿಕ ಸಮಸ್ಯೆ ಎದುರಾಗಿ ಕಳೆದ ಐದು ದಿನಗಳಿಂದ ಕಬ್ಬು ಅರಿಯುವಿಕೆಯನ್ನ ಆಡಳಿತ ಮಂಡಳಿ ಸ್ಥಗಿತ ಮಾಡಿದೆ.
ತಾಂತ್ರಿಕ ಸಮಸ್ಯೆಯ ಕಾರಣ ನೀಡಿ, ಕಬ್ಬು ಅರೆಯುವಿಕೆ ಸ್ಥಗಿತಗೊಂಡಿದ್ದು, ಇದರಿಂದಾಗಿ ಕಷ್ಟಪಟ್ಟು ರೈತರು ಬೆಳೆದಿದ್ದ ಕಬ್ಬು ಬಿಸಿಲಿನಲ್ಲಿ ಒಣಗುತ್ತಿದೆ. ಇದೀಗ ಲಾಭವಲ್ಲ, ತಮ್ಮ ಬಂಡವಾಳವೂ ಬರದ ಸ್ಥಿತಿಗೆ ಅನ್ನದಾತ ಬಂದಿದ್ದು, ಕಾರ್ಖಾನೆಯ ಅಧಿಕಾರಿಗಳ ವಿರುದ್ದ ರೈತರು ಹಿಡಿಶಾಪ ಹಾಕುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ 50 ಕೋಟಿ ಹಣವನ್ನ ಬಿಡುಗಡೆ ಮಾಡಿತ್ತು. ಹೀಗಾಗಿ ಕಳೆದ ವರ್ಷ 2 ಲಕ್ಷ 41 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಈ ಬಾರಿ ಕೂಡ ರೈತರ ಬಳಿ ಕಬ್ಬು ಒಪ್ಪಿಗೆಯಾಗಿದ್ದು, 2 ಲಕ್ಷ 50 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿಯನ್ನ ಹೊಂದಲಾಗಿದೆ.
ಜೂನ್ 30ರಂದೇ ಕಬ್ಬು ಅರಿಯುವಿಕೆಗೆ ಚಾಲನೆ ಸಹ ನೀಡಲಾಗಿದೆ. ಆಗಸ್ಟ್ 2ರಿಂದ ಕಬ್ಬು ಅರೆಯುವಿಕೆ ಕೆಲಸ ನಡೆಯುತ್ತಿದೆ. ಹೀಗಾಗಿ ಒಪ್ಪಿಗೆ ಮಾಡಿಕೊಂಡ ರೈತರು ಎತ್ತಿನ ಗಾಡಿಗಳ ಮೂಲಕ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುತ್ತಿದ್ದಾರೆ. ಆದರೆ, ತಾಂತ್ರಿಕ ಕಾರಣವನ್ನ ಮುಂದಿಟ್ಟು ಐದು ದಿನಗಳಿಂದ ಕಾರ್ಖಾನೆಯನ್ನ ಸ್ಥಗಿತ ಮಾಡಲಾಗಿದೆ.