ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ವಿದ್ಯಾರ್ಥಿಗಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆಗಳು ಪೂರಕ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆ ಪರಸ್ಪರ, ಸ್ನೇಹ, ಬಾಂಧವ್ಯ ವೃದ್ಧಿಸುವ ಮತ್ತು ನಾಯಕತ್ವದ ಗುಣ ಬೆಳೆಯುವಲ್ಲಿ ನೆರವಾಗುತ್ತದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಬುಧವಾರ ಲಕ್ಷ್ಮೇಶ್ವರ ಪುರಸಭೆಯ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಪ.ಪೂ ಶಿಕ್ಷಣ ಇಲಾಖೆ, ಪುರಸಭೆ ಕಾರ್ಯಾಲಯ ಹಾಗೂ ಪುರಸಭೆ ಪ.ಪೂ ಕಾಲೇಜುಗಳ ಸಹಯೋಗದಲ್ಲಿ ಲಕ್ಷ್ಮೇಶ್ವರ ತಾಲೂಕು ಮಟ್ಟದ ಪ.ಪೂ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಕ್ರೀಡೆಯಿಂದ ಶಿಸ್ತು, ಸಂಯಮ ಮತ್ತು ಆರೋಗ್ಯ ವೃದ್ಧಿಸುತ್ತದೆ. ಕ್ರೀಡೆಯಲ್ಲಿ ಗೆಲ್ಲಲು ಉತ್ತಮ ತರಬೇತಿ ಅಗತ್ಯ. ಪರಿಣತಿಯನ್ನು ಗಳಿಸಲು ಸತತ ಸಾಧನೆ ಮಾಡಬೇಕು. ಉತ್ತಮ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುವದು ಅವಶ್ಯವಾಗಿದೆ.
ಕ್ರೀಡೆಯಿಂದ ಸಾಧನೆ ಮಾಡಿದ ಅನೇಕರು ಇಂದು ನಮ್ಮ ನಡುವೆಯಿದ್ದು, ಓಲಂಪಿಕ್ ಕ್ರೀಡೆಯಲ್ಲಿ ಆಟಕ್ಕೆ ಇರುವ ಮಹತ್ವ ಎಷ್ಟು ದೊಡ್ಡದು ಎನ್ನುವದನ್ನು ನೋಡಬಹುದಾಗಿದೆ.
ಗದಗ ಜಿಲ್ಲಾ ಕ್ರೀಡಾ ಸಂಚಾಲಕ ಎಂ.ಕೆ. ಲಮಾಣಿ ಪ್ರತಿಜ್ಞಾ ವಿಧಿ ಬೋಧಿಸಿದರು. ವೇದಿಕೆಯಲ್ಲಿ ತಾಲೂಕಾ ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜುನಾಥ ಕೊಕ್ಕರಗುಂದಿ, ನವೀನ ಬೆಳ್ಳಟ್ಟಿ, ನಿವೃತ್ತ ಶಿಕ್ಷಕ ಎಚ್.ಎಂ. ಮುಳಗುಂದ, ಪುರಸಭೆ ಪ.ಪೂ ಕಾಲೇಜು ಪ್ರಾಚಾರ್ಯ ಅಶೋಕ ಕಳ್ಳಿಮನಿ, ಉಪನ್ಯಾಸಕರಾದ ಜಗದೀಶ ದ್ಯಾಮಣ್ಣವರ, ಸೌಂದರ್ಯ ಕುಲಕರ್ಣಿ, ಎಮ್.ಎಚ್. ಬೊದ್ಲೆಖಾನ್, ಚೈತ್ರಾ ಪಾಣಿಗಟ್ಟಿ, ನೇತ್ರಾ ಹಿತ್ತಲಮನಿ, ಪಿ.ಡಿ. ದೇಶಪಾಂಡೆ, ಬಿ.ಜೆ. ಪಾಟೀಲ, ಹಾಗೂ ತಾಲೂಕಿನ ಪ.ಪೂ ಕಾಲೇಜುಗಳ ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು, ನಿರ್ಣಾಯಕರು ಎಚ್.ಎಲ್. ಕೋರಿ, ಶಿಲ್ಪಾ ಮುದಗಲ್ ಇದ್ದರು.
ಡಿ.ಎಂ. ಪೂಜಾರ ಸ್ವಾಗತಿಸಿದರು. ಎಸ್.ಜಿ. ಹುಳಕನವರ ನಿರೂಪಿಸಿದರು. ಮಂಜುನಾಥ ಬೂದಿಹಾಳ ವಂದಿಸಿದರು.
ವಿದ್ಯಾರ್ಥಿಗಳು ಕ್ರೀಡೆಯ ಜೊತೆಗೆ ಪಾಠಕ್ಕೂ ಅಷ್ಟೇ ಆದ್ಯತೆ ನೀಡಬೇಕು. ಸಾಧನೆ ಮಾಡುವ ಛಲ ನಿಮ್ಮಲ್ಲಿದ್ದರೆ ಗುರಿ ತಲುಪುವ ಹಾದಿ ಸುಲಭವಾಗಲಿದೆ. ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಅವಶ್ಯವಾಗಿದ್ದು, ನಮ್ಮ ಪುರಸಭೆಯ ಪ.ಪೂ ಕಾಲೇಜಿನಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ನಡೆಸಲು ಅವಕಾಶ ದೊರಕಿಸಿಕೊಟ್ಟಿದ್ದಕ್ಕೆ ಇಲಾಖೆ ಅಧಿಕಾರಿಗಳಿಗೆ ಧನ್ಯವಾದಗಳನ್ನು ಹೇಳುತ್ತೇವೆ ಎಂದರಲ್ಲದೆ, ಗೆಲುವು-ಸೋಲುಗಳನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳಿ ಎಂದು ಮುಖ್ಯಾಧಿಕಾರಿ ಮಹೇಶ ಹಡಪದ ಕಿವಿಮಾತು ಹೇಳಿದರು.