ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲಕ್ಷ್ಮೇಶ್ವರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ ಯಲ್ಲವ್ವ ಗಂಗಪ್ಪ ದುರಗಣ್ಣವರ ಅಧ್ಯಕ್ಷೆಯಾಗಿ, ಕಾಂಗ್ರೆಸ್ ಪಕ್ಷದ ಸದಸ್ಯ ಫಿರ್ಧೋಸ್ ಆಡೂರ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ತೀವ್ರ ಕುತೂಹಲಕ್ಕೆ ಕಾರಣವಾದ 2ನೇ ಅವಧಿಯ ಚುನಾವಣೆಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಅ) ಮಹಿಳೆ ಹಾಗೂ ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಒಟ್ಟು 23 ಸದಸ್ಯರ ಬಲ ಹೊಂದಿರುವ ಪುರಸಭೆಗೆ ಕಾಂಗ್ರೆಸ್ 9, ಬಿಜೆಪಿ 7, ಜೆಡಿಎಸ್ 2 ಹಾಗೂ 5 ಜನ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಬಿಜೆಪಿ ಸದಸ್ಯೆ ನಿಧನ ಹೊಂದಿದ್ದರಿಂದ ಬಿಜೆಪಿ ಸದಸ್ಯರ ಸಂಖ್ಯೆ 6ಕ್ಕೆ ಕುಸಿದಿತ್ತು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯೆ ಯಲ್ಲವ್ವ ದುರಗಣ್ಣವರ ಅಪರೇಷನ್ ಹಸ್ತಕ್ಕೊಳಗಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮತ್ತು ಬಿಜೆಪಿ ಪಕ್ಷದಿಂದ ಕವಿತಾ ಗೋವಿಂದಪ್ಪ ಶರಸೂರಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಅಪರೇಷನ್ ಕಮಲಕ್ಕೊಳಗಾಗಿ ಕಾಂಗ್ರೆಸ್ ಸದಸ್ಯ ಮಹದೇವಪ್ಪ ಅಣ್ಣಿಗೇರಿ, ಕಾಂಗ್ರೆಸ್ ಸದಸ್ಯ ಫಿರ್ಧೋಸ್ ಆಡೂರ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆ ಪ್ರಕ್ರಿಯೆ ನಡೆದು ಯಲ್ಲವ್ವ ದುರಗಣ್ಣವರ ಅವರು ಕಾಂಗ್ರೆಸ್ನ 8, ಪಕ್ಷೇತರ 3, ಜೆಡಿಎಸ್ನ ಓರ್ವ ಸದಸ್ಯರು ಸೇರಿ ಒಟ್ಟು 13 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್ ಸದಸ್ಯರ ಫಿರ್ಧೋಸ್ ಆಡೂರ 13 ಸದಸ್ಯರ ಬೆಂಬಲದಿಂದ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕವಿತಾ ಗೋವಿಂದಪ್ಪ ಶೆರಸೂರಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಾದೇವಪ್ಪ ಅಣ್ಣಿಗೇರಿ ಬಿಜೆಪಿಯ-5, ಜೆಡಿಸ್-1, ಪಕ್ಷೇತರರ-2, ಕಾಂಗ್ರೇಸ್-1 ಮತ್ತು ಶಾಸಕ ಡಾ.ಚಂದ್ರು ಲಮಾಣಿ ಚುನಾವಣೆ ರಣತಂತ್ರ ಹೆಣೆದು ತಮ್ಮ ಮತ ಚಲಾಯಿಸಿದರೂ ಕೇವಲ 10 ಮತ ಗಳಿಸಲಷ್ಟೇ ಶಕ್ತರಾದರು. ತಹಸೀಲ್ದಾರ ವಾಸುದೇವ ಸ್ವಾಮಿ ಚುನಾವಣಾಧಿಕಾರಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು. ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಉಪಸ್ಥಿತರಿದ್ದರು.
ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯ ರಾಜಕಾರಣ ಮಾಡುತ್ತಿದ್ದರೂ ಲಕ್ಷ್ಮೇಶ್ವರ ಪುರಸಭೆಯಲ್ಲಿದ್ದ 2 ಸದಸ್ಯರು ಚುನಾವಣೆಯಲ್ಲಿ ಓರ್ವ ಸದಸ್ಯ ಪ್ರವೀಣ ಬಾಳಿಕಾಯಿ ಬಿಜೆಪಿಗೆ ಬೆಂಬಲ ನೀಡಿದರೆ ಇನ್ನೋರ್ವ ಸದಸ್ಯ ಮುಸ್ತಾಕ್ ಅಹ್ಮದ ಶಿರಹಟ್ಟಿ ಕಾಂಗ್ರೆಸ್ಗೆ ಬೆಂಬಲ ನೀಡಿದರು.
ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವಿಜಯ ಸಾಧಿಸುತ್ತಿದ್ದಂತೆಯೇ ಪುರಸಭೆಯೆದುರು ಸೇರಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಬಣ್ಣ ಹಚ್ಚಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಗುರುನಾಥ ದಾನಪ್ಪನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ, ವಿ.ಜಿ. ಪಡಗೇರಿ, ಸೋಮಣ್ಣ ಬೆಟಗೇರಿ ಮುಂತಾದವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ದೊರಕಿರುವದಕ್ಕೆ ಸಂತಸ ವ್ಯಕ್ತಪಡಿಸಿ ಮಾತನಾಡಿದರು.
ಮುಖಂಡರಾದ ಕೋಟೆಪ್ಪ ವರ್ದಿ, ಬಸವರಾಜ ಹೊಳಲಾಪೂರ, ಪದ್ಮರಾಜ ಪಾಟೀಲ, ಅಮರೇಶ ತೆಂಬದಮನಿ, ರಾಮು ಅಡಗಿಮನಿ, ವಿರೇಂದ್ರಗೌಡ ಪಾಟೀಲ, ನೀಲಪ್ಪ ಶರಸೂರಿ, ಅಮರಪ್ಪ ಗುಡಗುಂಟಿ, ದಾದಾಪೀರ ಮುಚ್ಚಾಲೆ, ಶರಣು ಗೋಡಿ, ಕಿರಣ ನವಲೆ, ಸದಾನಂದ ನಂದೆಣ್ಣವರ, ಮುದಕಪ್ಪ ಗದ್ದಿ, ನೀಲಪ್ಪ ಪೂಜಾರ, ಮಂಜಪ್ಪ ಶರಸೂರಿ, ಸಂತೋಷ ಕುರಿ, ಪರಮೇಶ ಲಮಾಣಿ, ಬಸವಣ್ಣೆಪ್ಪ ನಂದೆಣ್ಣವರ ಸೇರಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಮಾಜಿ ಶಾಸಕರ ಹಾಗೂ ಹಿರಿಯರ ಮಾರ್ಗದರ್ಶನ-ಸಹಕಾರದಿಂದ ಹೆಚ್ಚಿನ ಅನುದಾನ ತರುವ ಮೂಲಕ, ಸರ್ವ ಸದಸ್ಯರ ವಿಶ್ವಾಸ ಪಡೆದು ಲಕ್ಷ್ಮೇಶ್ವರ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು.
– ಯಲವ್ವ ದುರಗಣ್ಣವರ.
ನೂತನ ಅಧ್ಯಕ್ಷೆ.ಚುನಾವಣೆ ನಂತರದಲ್ಲಿ ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕಳೆದ ಹಲವು ವರ್ಷಗಳಿಂದ ಲಕ್ಷ್ಮೇಶ್ವರ ಪುರಸಭೆಯಲ್ಲಿ ನಡೆಸುತ್ತಾ ಬಂದಿದ್ದ ಪಕ್ಷಾತೀತ/ಹೊಂದಾಣಿಕೆ ರಾಜಕಾರಣಕ್ಕೆ ತೆರೆ ಬಿದ್ದಿತು ಎಂಬ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬಂದವು.