ಸಿದ್ದರಾಮಯ್ಯರನ್ನು ಮುಟ್ಟಿದರೆ ಸಹಿಸಲಾಗದು : ಸಂಗನಗೌಡ ಪಾಟೀಲ

0
Protest against Governor by Ahinda organization
Spread the love

ವಿಜಯಸಾಕ್ಷಿ ಸುದ್ದಿ, ರೋಣ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ಸಂವಿಧಾನ ಬಾಹಿರ ಕ್ರಮ ತೆಗೆದುಕೊಂಡಿರುವುದು ಸರಿಯಾದ ಕ್ರಮವಲ್ಲ. ಅನಗತ್ಯವಾಗಿ ಸಿದ್ದರಾಮಯ್ಯನವರನ್ನು ಮುಟ್ಟಿದರೆ ಸಹಿಸಲು ಸಾಧ್ಯವಿಲ್ಲ ಎಂದು ಯುವ ಮುಖಂಡ, ಪುರಸಭೆಯ ಸದಸ್ಯ ಸಂಗನಗೌಡ ಪಾಟೀಲ ಎಚ್ಚರಿಸಿದರು.

Advertisement

ಅವರು ಸೋಮವಾರ ಪಟ್ಟಣದಲ್ಲಿ ಅಹಿಂದ ಸಂಘಟನೆಯಿಂದ ರಾಜ್ಯಪಾಲರ ವಿರುದ್ಧ ಜರುಗಿದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರವನ್ನು ಹೆಣದಿರುವುದು ರಾಜ್ಯದ ಜನತೆಗೆ ತಿಳಿದಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿರುವುದನ್ನು ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಸರಕಾರವನ್ನು ಅಸ್ಥಿರಗೊಳಿಸುವ ವಿಫಲ ಪ್ರಯತ್ನ ನಡೆಸಿದ್ದು, ಇದಕ್ಕೆ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುವ ಮೂಲಕ ಒಂದು ಪಕ್ಷದ ಕಾರ್ಯಕರ್ತರಂತೆ ನಡೆದುಕೊಂಡಿರುವುದು ಸಂವಿಧಾನ ಬಾಹಿರವಾಗಿದೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.

ತಾ.ಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ ಮಾತನಾಡಿ, ಸಿದ್ದರಾಮಯ್ಯನವರು ದೇಶ ಕಂಡಿರುವ ಅಪ್ರತಿಮ ನಾಯಕರು. ಇಂತಹ ನಾಯಕರ ವಿರುದ್ಧ ವಿರೋಧ ಪಕ್ಷದವರು ನಡೆಸುತ್ತಿರುವ ಆರೋಪ ಆಧಾರ ರಹಿತವಾಗಿದೆ. ಈ ವಿಚಾರವಾಗಿ ರಾಷ್ಟçಪತಿಗಳು ಮಧ್ಯಸ್ಥಿಕೆ ವಹಿಸಿ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ರಾಜಭವನವನ್ನು ಬಿಜೆಪಿ, ಜೆಡಿಎಸ್ ಪಕ್ಷಗಳ ಕಾರ್ಯಾಲಯವಾಗಲು ರಾಜ್ಯದ ಜನರು ಬಿಡುವುದಿಲ್ಲ. ಮುಖ್ಯವಾಗಿ ರಾಜ್ಯಪಾಲರು ತಮ್ಮ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹ ಮಾಡಿದರು.

ನಂತರ ತಹಸೀಲ್ದಾರ ಕಚೇರಿಗೆ ತೆರಳಿ ರಾಜ್ಯಪಾಲರ ನಡೆಯನ್ನು ಖಂಡಿಸಿ ತಹಸೀಲ್ದಾರ ನಾಗರಾಜ ಕೆ.ರವರಿಗೆ ಮನವಿ ಸಲ್ಲಿಸಲಾಯಿತು. ಎಸ್.ಎಚ್. ಸೋಂಪುರ, ಶಫೀಕ ಮೂಗನೂರ, ಸಂಜಯ ದೊಡ್ಡಮನಿ, ಈರಪ್ಪ ನಿಡಗುಂದಿ, ಶಿವಪ್ಪ ಜಾಲಿಹಾಳ, ಲಕ್ಷ್ಮಣ ಗೌಡನ್ನವರ, ಬಸವರಾಜ ತಳವಾರ, ಸೋಮು ನಾಗರಾಜ ಸೇರಿದಂತೆ ಅಹಿಂದ ವರ್ಗದ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಅಹಿಂದ ತಾಲೂಕಾಧ್ಯಕ್ಷ ಬಸವರಾಜ ಜಗ್ಗಲ ಮಾತನಾಡಿ, ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರ ಯಾವುದೇ ಪಾತ್ರವಿಲ್ಲ. ಶುದ್ಧ ಹಸ್ತರಾದ ಸಿದ್ದರಾಮಯ್ಯನವರ ಮೆಲೆ ಆರೋಪ ಮಾಡುವುದು ಸಮಂಜಸವಲ್ಲ. ರಾಜ್ಯಪಾಲರು ತಮ್ಮ ಸಂವಿಧಾನ ವಿರೋಧಿ ನಡೆಯಿಂದ ಹೊರಬರಬೇಕು. ಇಲ್ಲದಿದ್ದರೆ ಅಹಿಂದ ಮತ್ತಷ್ಟು ಹೋರಾಟ ನಡೆಸಲಿದೆ ಎಂದರು.


Spread the love

LEAVE A REPLY

Please enter your comment!
Please enter your name here