ವಿಜಯಸಾಕ್ಷಿ ಸುದ್ದಿ, ಗದಗ : ಕೇವಲ ಶಿಕ್ಷಣ, ಪದವಿಯಿಂದ ಮಾತ್ರ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಇಂತಹ ಸಂಸ್ಕಾರ ಮನೆಯಿಂದ, ತಾಯಿಯಿಂದಲೇ ಆರಂಭವಾಗುವುದು. ಹೀಗಾಗಿ ಪ್ರತಿಯೊಬ್ಬರಿಗೂ ತಾಯಿಯೇ ಜಗತ್ತು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹಾಗೂ ನಗರಸಭೆ ಆಯುಕ್ತರಾದ ಮಹೇಶ ಪೋತದಾರ ಅಭಿಪ್ರಾಯಪಟ್ಟರು.
ಅವರು ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ‘ಮಾತೃನಮನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಿಮ್ಮ ಮಕ್ಕಳೇ ನಿಮ್ಮ ಭವಿಷ್ಯವಾಗಬೇಕು. ಅಂತಹ ಭವಿಷ್ಯದ ವಾತಾವರಣವನ್ನು ನಿರ್ಮಾಣ ಮಾಡುವ ದೊಡ್ಡ ಹೊಣೆಗಾರಿಕೆ ತಂದೆ-ತಾಯಿಯ ಮೇಲಿದೆ. ಮನೆಯ ಉತ್ತಮ ಸಂಸ್ಕಾರದಿಂದ ಒಳ್ಳೆಯ ಮಕ್ಕಳನ್ನು ರೂಪಿಸಲು ಸಾಧ್ಯ. ಶಿಕ್ಷಣ, ಪದವಿಗಳು ಭವಿಷ್ಯದ ಬದುಕಿನಲ್ಲಿ ಆಸರೆ ಮಾತ್ರ. ಆದರೆ ಸಂತೃಪ್ತ ಜೀವನ ಕಳೆಯಲು ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಕರು ಜಗತ್ತಿನ ಎಲ್ಲ ಕ್ಷೇತ್ರದ ಪ್ರತಿಭಾನ್ವಿತರನ್ನು ಮೇಧಾವಿಗಳನ್ನು ರೂಪಿಸಿದರೂ ನಾನೊಬ್ಬ ಸಾಮಾನ್ಯ ಶಿಕ್ಷಕ ಎನ್ನುವ ಮನೋಭಾವ ಅವರದ್ದಾಗಿರುತ್ತದೆ.
ನೂರಾರು ತಾಯಂದಿರ ಪಾದಪೂಜೆಯನ್ನು ವಿದ್ಯಾರ್ಥಿಗಳು ಮಾಡುವ ಮೂಲಕ ಮಾತೃನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಯಂದಿರು ಕೂಡಾ ತಮ್ಮ ಮಕ್ಕಳು ಉತ್ತಮ ಪ್ರಜೆಯಾಗಲಿ ಎಂದು ಹಾರೈಸಿದ್ದು ಸೇರಿದವರೆಲ್ಲರಿಗೂ ಕೆಲ ಕ್ಷಣ ಹೃದಯವನ್ನು ಸ್ಪರ್ಶಿಸುವಂತಿತ್ತು.
ಡಾ. ಬಸವರಾಜ ಧಾರವಾಡ, ಎಚ್.ಆರ್. ಪೆಟ್ಲೂರ್, ಉಪನ್ಯಾಸಕ ಶಂಕರ ಹಡಗಲಿ ಸೇರಿದಂತೆ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಅಣ್ಣಿಗೇರಿ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸುಭಾಸ ನಿಡಸನೂರ, ಎ.ಎಮ್. ಸಂಗನಾಳ, ಶಂಕ್ರಮ್ಮ ಆರ್. ಹಣಮಗೌಡ್ರು, ಎಂ.ಐ. ಶಿವನಗೌಡ್ರು, ಮಂಜುಳಾ ಪಿ.ಸಾಮ್ರಾಣಿ, ಸುಮಂಗಲ ಎಂ.ಪತ್ತಾರ್, ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಸಂಜೀವಿನಿ ಕೂಲಗುಡಿ, ಮಂಜುಳಾ ಟಿ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್ ಮುಂತಾದವರು ಉಪಸ್ಥಿತರಿದ್ದರು.
ಶಶಿಕಲಾ ಬಿ.ಗುಳೇದ ಸ್ವಾಗತಿಸಿದರು. ಗಂಗಾ ಎಂ.ಅಳವಂಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಆಯೋಜಕಿ ಶಾರದಾ ಬಾಣದ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.
ಶಿಕ್ಷಕರ ತ್ಯಾಗ, ಶ್ರಮ, ತಂದೆ-ತಾಯಿಯರ ಆಶಯ ಈಡೇರಬೇಕಾದರೆ ವಿದ್ಯಾರ್ಥಿಗಳು ತಮ್ಮ ಸುಂದರ ಬದುಕನ್ನು ಕಟ್ಟಿಕೊಳ್ಳಲು ಅನಾವಶ್ಯಕ ವಿಷಯಗಳಿಂದ ದೂರವಾಗಿ ಭವಿಷ್ಯಕ್ಕೆ ಸಮಾಜದ ಒಳಿತಿಗೆ ಹಾಗೂ ತಂದೆ-ತಾಯಿಗಳ ಹಿತ ಕಾಪಾಡುವತ್ತ ಗಮನ ಹರಿಸಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಇಡಬೇಕು. ಈ ಮಾತೃನಮನ ಕಾರ್ಯಕ್ರಮ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಪೂರಕವಾಗಬಲ್ಲದು ಎಂದು ಮಹೇಶ ಪೋತದಾರ ಅಭಿಪ್ರಾಯಪಟ್ಟರು.