ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿರುವ ಉದ್ದಿಮೆಗಳು ಹಾಗೂ ಕೈಗಾರಿಕಾ ಸಂಸ್ಥೆಗಳು ತಮ್ಮ ಸಿಎಸ್ಆರ್ ಅನುದಾನವನ್ನು ಸ್ಥಳೀಯ ಸರ್ಕಾರಿ ಶಾಲಾ ಕಟ್ಟಡಕ್ಕೆ ಬಳಕೆ ಮಾಡಬೇಕು. ಈ ಮೂಲಕ ಶೈಕ್ಷಣಿಕ ಕ್ರಾಂತಿಗೆ ಉದ್ದಿಮೆದಾರರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಸಭಾಭವನದಲ್ಲಿ ಬುಧವಾರ ಜಿಲ್ಲೆಯ ಉದ್ದಿಮೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿಎಸ್ಆರ್ ಅನುದಾನವನ್ನು ಸ್ಥಳಿಯ ಶಾಲೆಗಳಿಗೆ ನೀಡಬಹುದು ಇಲ್ಲವೇ ತಾವೇ ಸಿಎಸ್ಆರ್ ಅನುದಾನದಿಂದ ಇಲಾಖೆ ಗುರುತಿಸಿದ ನಿವೇಶನದಲ್ಲಿ ಶಾಲಾ ಕೊಠಡಿ ಕಟ್ಟಡ ನಿರ್ಮಾಣ ಮಾಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ತಮ್ಮ ಸಂಸ್ಥೆಯಿಂದ ಕೊಡುಗೆ ನೀಡಿದಂತಾಗುತ್ತದೆ. ತಾವು ನೀಡಿದ ಕೊಡುಗೆ ಶಾಶ್ವತವಾಗಿರಲಿದೆ. ಅನುದಾನ ನೀಡುವುದರಿಂದ ಇಂಡಸ್ಟ್ರಿ ಕಂಪನಿಯ ಬ್ರ್ಯಾಂಡಿಂಗ್ ಮಾಡಲು ಸಹಕಾರಿಯಾಗುತ್ತದೆ. ಇಲ್ಲಿಯ ಮೂಲಭೂತ ಸೌಕರ್ಯಗಳ ಬಳಸಿ ಇಂಡಸ್ಟ್ರಿಗಳು ನಡೆಯುತ್ತವೆ. ಹಾಗಾಗಿ ಸಿಎಸ್ಆರ್ ಅನುದಾನವನ್ನು ಸ್ಥಳೀಯವಾಗಿ ಬಳಕೆ ಮಾಡಿ ಎಂದು ಹೇಳಿದರು.
ಸಿಎಸ್ಆರ್ ಅನುದಾನ ನೀಡಲು ಕಂಪನಿಗಳು ಮುಕ್ತವಾಗಿದ್ದು, ಸ್ವತಃ ಇಂಡಸ್ಟ್ರಿ ಕಂಪನಿಯವರೇ ತಮಗೆ ಇಷ್ಟವಾದ ಶಾಲೆಯನ್ನು ಆಯ್ಕೆ ಮಾಡಿಕೊಂಡು ತಮ್ಮದೇ ಶೈಲಿಯಲ್ಲಿ ಕಟ್ಟಡ ನಿರ್ಮಿಸಿ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಸರ್ಕಾರ ನಿರಂತರವಾಗಿ ಉದ್ಯಮಗಳ ಅಭಿವೃದ್ಧಿಗೆ ಮತ್ತು ಸ್ಥಾಪನೆಗೆ ಅಗತ್ಯ ಸಹಕಾರ ನೀಡುತ್ತಾ ಬಂದಿದೆ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಮತ್ತು ಚಾಲನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ. ಹಾಗೆಯೇ ಕೈಗಾರಿಕೆಗಳು ತಮ್ಮ ಸಿಎಸ್ಆರ್ ಅನುದಾನದ ಮೂಲಕ ಸಹಕಾರ ನೀಡಬೇಕು ಎಂದು ಹೇಳಿದರು.
ಈಗಾಗಲೇ ಎಲ್ಲಾ ಇಂಡಸ್ಟ್ರಿ-ಕಂಪನಿಗಳು ತಮ್ಮ ಸಿಎಸ್ಆರ್ ಅನುದಾನದ ಮೂಲಕ ಸಾಮಾಜಿಕ ಕಾರ್ಯ ಮಾಡಿದ್ದೀರಿ. ಅದರ ಜೊತೆ ಇನ್ನಷ್ಟು ಉತ್ತಮ ಕಾರ್ಯವಾಗಲಿ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಶಿವಪುತ್ರಪ್ಪ ಎಚ್., ಉಪನಿರ್ದೇಶಕ ವಿನಾಯಕ ಜೋಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಕ ಜಿ.ಎಲ್. ಬಾರಟಕ್ಕೆ, ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಸೇರಿದಂತೆ ಉದ್ದಿಮೆದಾರರು ಹಾಜರಿದ್ದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಮಾತನಾಡಿ, ಪ್ರತಿ ಇಂಡಸ್ಟ್ರಿಯ ಶೇಕಡಾ 2 ರಷ್ಟು ಸಿಎಸ್ಆರ್ ಅನುದಾನವನ್ನು ಸ್ಥಳೀಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ನೀಡುವಂತೆ ಕೋರಿದರು.


