ಬೆಂಗಳೂರು:- ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಜೈಲು ಹೋದಮೇಲೆ ಫ್ಯಾನ್ಸ್ ಗಳ ಹುಚ್ಚಾಟ ಎಲ್ಲೆ ಮೀರಿದೆ.
ಒಂದೆಡೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಎ1 ಪವಿತ್ರಾ ಗೌಡ, ಎ2 ದರ್ಶನ್ ಸೇರಿದಂತೆ ಒಟ್ಟೂ 17 ಆರೋಪಿಗಳ ವಿರುದ್ಧ ಬರೋಬ್ಬರಿ 3991 ಪುಟಗಳ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಇದರಲ್ಲಿ ದಾಸ ದರ್ಶನ್ ಆ್ಯಂಡ್ ಗ್ಯಾಂಗ್ ಮಾಡಿದೆ ಎನ್ನಲಾದ ಕ್ರೌರ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಡಲಾಗಿದ್ಯಂತೆ.
ಅತ್ತ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಈ ಚಾರ್ಜ್ ಶೀಟ್ ಬಗ್ಗೆ ತಿಳಿದು ಶಾಕ್ಗೆ ಒಳಗಾಗಿದ್ದರೆ, ಅವರ ಅಭಿಮಾನಿಗಳೂ ಕೂಡ ಕಂಗಾಲಾಗಿದ್ದಾರೆ. ಈ ನಡುವೆಯೇ ದಾಸನ ಅಭಿಮಾನಿಗಳಿಗೆ ಆರ್ಟಿಒ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ.
ಬಳ್ಳಾರಿ ಜೈಲಿಗೆ ಸ್ಥಳಾಂತರ ಆದಮೇಲೆ ವಾಹನಗಳ ಮೇಲೆ ಆಕ್ಷೇಪಾರ್ಹ, ಪ್ರಚೋದನಾಕಾರಿ, ಬೇರೆ ನಟರ ಅಭಿಮಾನಿಗಳ ವಿರುದ್ಧ ಟಾಂಗ್ ಕೊಡುವಂತೆ ಸ್ಟಿಕ್ಕರ್, ಬರಹಗಳ ಅಳವಡಿಕೆ ಮಾಡುವುದು ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಬರಹಗಳು ಹೆಚ್ಚಾಗಿವೆ.
ಈ ಹಿಂದೆ ಈ ಮಟ್ಟಿಗೆ ಬರಹಗಳನ್ನು ವಾಹನಗಳ ಮೇಲೆ ಹಾಕಿರಲಿಲ್ಲ. ಇದು ಆರ್ಟಿಒ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ. ಅನವಶ್ಯಕ, ಪ್ರಚೋದನಾಕಾರಿ ಬರಗಳು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ.
ನೆಚ್ಚಿನ ನಟರ ಪೋಟೋಗಳನ್ನು ವಾಹನಗಳ ಮೇಲೆ ಹಾಕುವುದರ ಜತೆಗೆ ಪ್ರಚೋದನಾಕಾರಿ ಬರಹ, ಸ್ಟಿಕ್ಕರ್ ಅಂಟಿಸಲು ಅವಕಾಶವಿಲ್ಲ ಎಂದು ಆರ್ಟಿಒ ಅಧಿಕಾರಿಗಳು ಹೇಳಿದ್ದಾರೆ.
ಈವರೆಗೆ ನಂಬರ್ ಪ್ಲೇಟ್ ಮೇಲೆ ಮಾತ್ರ ಬರಹ, ಸ್ಟಿಕ್ಕರ್ ಇದ್ದರೆ ಗಮನಿಸುತ್ತಿದ್ದೆವು. ಇನ್ನುಮುಂದೆ ವಾಹನಗಳ ಇತರ ಭಾಗಗಳಲ್ಲಿ ಕೂಡ ಅನಧಿಕೃತ ಬರಹ ಹಾಕಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಎಚ್ಚರಿಕೆ ಉಲ್ಲಂಘಿಸಿ ಸ್ಟಿಕ್ಕರ್, ಬರಹ ಅಂಟಿಸಿದಲ್ಲಿ ಮೊದಲ ಬಾರಿಗೆ 500 ರೂಪಾಯಿ, ಎರಡನೇ ಬಾರಿ 1000 ರೂಪಾಯಿ, ಮೂರನೇ ಬಾರಿ ಅದೇ ತಪ್ಪು ಮಾಡಿದರೆ ಪರವಾನಗಿಯನ್ನೇ ರದ್ದು ಮಾಡುತ್ತೇವೆ ಎಂದು ಆರ್ಟಿಒ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಆರ್ಟಿಒ ಅಡಿಷನಲ್ ಕಮಿಷನರ್ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ.
ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ಆರ್ಟಿಒ ಇಲಾಖೆಗಳಿಗೆ ನಿರ್ದೇಶನ ಕೊಡುತ್ತಾ ಬಂದಿದೆ. ಅದರ ಅನ್ವಯ ಆರ್ಟಿಒ ಅಧಿಕಾರಿಗಳು ಕೇಸುಗಳನ್ನ ದಾಖಲು ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್ಟಿಒ ಮಾಡುತ್ತಿದೆ. ಜೊತೆಗೆ 3 ವರ್ಷದಲ್ಲಿ ಹಲವು ಪ್ರಕರಣ ದಾಖಲು ಮಾಡಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.