ಬೆಂಗಳೂರು: ಅತ್ಯಾಚಾರದ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಗಳ ಆದೇಶವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ. ಮನೆಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಪ್ರಜ್ವಲ್ ಜಾಮೀನು ಕೋರಿದ್ದಾರೆ.
ಉಳಿದಂತೆ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಮತ್ತು ಅಶ್ಲೀಲ ವಿಡಿಯೊಗಳ ಹಂಚಿಕೆಯ ಸಂಬಂಧ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಹೈಕೋರ್ಟ್ನ ಜನಪ್ರತಿನಿಧಿಗಳ ಪೀಠದಲ್ಲಿ ಎರಡು ಕೇಸ್ ಗಳಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಹಾಗೂ ಒಂದು ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿಗಾಗಿ ಪ್ರಜ್ವಲ್ ಅರ್ಜಿ ಸಲ್ಲಿಸಿದ್ದರು. ಪ್ರಜ್ವಲ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ವಾದ ಮಂಡಿಸಿ, ಇದೊಂದು ರಾಜಕೀಯ ಷಡ್ಯಂತ್ರ್ಯವಾಗಿದ್ದು, 3-4 ವರ್ಷಗಳ ಹಿಂದೆ ಅತ್ಯಾಚಾರವಾಗಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಅತ್ಯಾಚಾರ ನಡೆದಿದೆ ಅನ್ನೋದಾದ್ರೆ ಆಗಲೇ ಯಾಕೆ ದೂರು ನೀಡಿರಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಜ್ವಲ್ ವಿರುದ್ಧ ದೂರು ದಾಖಲಾಗಿರುವುದು ದುರುದ್ದೇಶಪೂರಕ. ತನಿಖೆಗೆ ಸ್ಪಂದಿಸಿ, ಕಳೆದ 4 ತಿಂಗಳಿಂದ ಜೈಲಲಿದ್ದಾರೆ. ಹೀಗಾಗಿ ಜಾಮೀನು ನೀಡುವಂತೆ ವಾದ ಮಂಡಿಸಿದ್ರು. ಇದಕ್ಕೆ ಪರತಿವಾದ ಸಲ್ಲಿಸಿದ್ದ ಎಸ್ಪಿಪಿ ಪ್ರೊ.ರವಿವರ್ಮಕುಮಾರ್, ಆರೋಪಿ ಸಾಕ್ಷಿನಾಶ ಪಡಿಸಿದ್ದು, ಈವರೆಗೂ ತನಿಖೆಗೆ ಮೊಬೈಲ್ ಕೊಟ್ಟಿಲ್ಲ.
ಎಫ್ಐಆರ್ ದಾಖಲಾಗ್ತಿದ್ದಂತೆ ವಿದೇಶಕ್ಕೆ ಹಾರಿ ತಲೆ ಮರೆಸಿಕೊಂಡಿದ್ರು. ಪ್ರಭಾವಿಯಾಗಿದ್ದು ಜಾಮೀನಿನ ಮೇಲೆ ಹೊರ ಬಂದ್ರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರ್ತಾರೆ. ಹೀಗಾಗಿ ಜಾಮೀನು ನೀಡಬಾರದು ಅಂತ ಪ್ರತಿವಾದ ಮಂಡಿಸಿದ್ರು. ವಾದ-ಪ್ರತಿ ವಾದ ಆಲಿಸಿದ ಮಾನ್ಯ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಆದೇಶವನ್ನ ಕಾಯ್ದಿರಿಸಿದ್ದಾರೆ.