ಲಕ್ಕುಂಡಿ ಅಭಿವೃದ್ಧಿಗೆ ಸಂಪೂರ್ಣ ಸಹಕಾರ : ಎಚ್.ಕೆ. ಪಾಟೀಲ

0
Lakkundi Heritage Area Development Authority meeting
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಲಕ್ಕುಂಡಿ ಪ್ರದೇಶವನ್ನು ಅಭಿವೃದ್ಧಿಪಡಿಸುವ ಮೂಲಕ ಜಾಗತಿಕ ಪಾರಂಪರಿಕ ಸ್ಥಳ ಎಂದು ಗುರುತಿಸುವಂತೆ ಮಾಡಲು ನಾವೆಲ್ಲರೂ ಶ್ರಮಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು.

ಲಕ್ಕುಂಡಿ ಪ್ರದೇಶದಲ್ಲಿ ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಭೂಮಿ ಪೂಜೆಯನ್ನು ಇತ್ತೀಚೆಗೆ ನೆರವೇರಿಸಲಾಗಿದೆ. ಸರ್ಕಾರ ಲಕ್ಕುಂಡಿ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಿದ್ದು, ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದರು.

ಲಕ್ಕುಂಡಿ ಐತಿಹಾಸಿಕವಾಗಿ ಬಹಳ ವಿಶಿಷ್ಟವಾಗಿದೆ. ಇತ್ತೀಚೆಗೆ ಲಕ್ಕುಂಡಿಯಲ್ಲಿ ಬೌದ್ಧ ಶಾಸನ ದೊರೆತಿದ್ದು ಇತಿಹಾಸವನ್ನು ಸಾರಿ ಹೇಳುತ್ತಿವೆ. ಲಕ್ಕುಂಡಿ ಇತಿಹಾಸ ಕುರಿತಂತೆ ಪುಸ್ತಕಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಆಗಿಲ್ಲ. ಲಕ್ಕುಂಡಿ ಇತಿಹಾಸವನ್ನು ನಾವುಗಳೇ ಅರಿತು ಇನ್ನೊಬ್ಬರಿಗೆ ನಮ್ಮತನವನ್ನು ಪಸರಿಸುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರವು ನೀಡಿದ ಅನುದಾನವನ್ನು ಅನಗತ್ಯವಾಗಿ ಮನಬಂದಂತೆ ವ್ಯಯಿಸಲು ಅವಕಾಶವಿಲ್ಲ. ಪ್ರತಿ ರೂಪಾಯಿಯೂ ಮೌಲ್ಯಯುತ ಕಾರ್ಯಕ್ಕೆ ಬಳಕೆಯಾಗಬೇಕು. ವಿನಾಕಾರಣ ಅಪವ್ಯಯ ಸಹಿಸಲಾಗದು ಎಂದು ಸಂಬಂಧಿತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ 250 ಕೋಟಿ ರೂ ಹಣ ಮೀಸಲಿದೆ. ಲಕ್ಕುಂಡಿ ಅಭಿವೃದ್ಧಿಗಾಗಿ ಅಗತ್ಯವಿರುವ ಡಿಪಿಆರ್ ಸಿದ್ಧಪಡಿಸಿ ಶೀಘ್ರವೇ ಸಲ್ಲಿಸುವ ಮೂಲಕ ಅನುಮೋದನೆ ಪಡೆಯುವಂತೆ ಸಚಿವ ಎಚ್.ಕೆ. ಪಾಟೀಲರು ಸೂಚಿಸಿದರು.

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಲೊಕೋಪಯೋಗಿ ಇಲಾಖೆಯಲ್ಲಿ ಉತ್ತಮ ಆರ್ಕೆಟಿಕ್ ವಿಭಾಗ ಕಾರ್ಯನಿರ್ವಹಿಸುತ್ತಿದ್ದು, ಅವರ ಸಹಕಾರದೊಂದಿಗೆ ಉತ್ತಮ ಡಿಪಿಆರ್ ಸಿದ್ಧಪಡಿಸಿ ಸಲ್ಲಿಸಬಹುದಾಗಿದೆ.

ಲಕ್ಕುಂಡಿ ಇತಿಹಾಸ ಪರಂಪರೆ ನಾಡಿನುದ್ದಕ್ಕೂ ಪಸರಿಸಲು ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು.

ಸಭೆಯಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯಮಟ್ಟದ ಸಲಹಾ ಸಮಿತಿ ಸದಸ್ಯರಾದ ಸಿದ್ದು ಪಾಟೀಲ, ಅ.ದ. ಕಟ್ಟಿಮನಿ ಸೇರಿದಂತೆ ಲಕ್ಕುಂಡಿ ಗ್ರಾ.ಪಂ ಸದಸ್ಯರು, ಸಾಹಿತಿ ಪುಂಡಲೀಕ ಕಲ್ಲಿಗನೂರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ ಸಿಇಓ ಭರತ್ ಎಸ್, ಪುರಾತತ್ವ ಇಲಾಖೆಯ ಆಯುಕ್ತ ದೇವರಾಜ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಶಿರೋಳ, ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಹಾಜರಿದ್ದರು.

ಅಭಿವೃದ್ಧಿ ಮತ್ತು ಉತ್ಖನನದ ವೇಳೆ ದೊರೆತ ಶಾಸನ, ಶಿಲೆ, ವಿಗ್ರಹಗಳಿಗೆ ಧಕ್ಕೆಯಾಗದಂತೆ ನಿಖರವಾಗಿ ಮೂಲ ವಿಗ್ರಹ ದೇವಸ್ಥಾನಗಳಿಗೆ ಧಕ್ಕೆಯಾಗದಂತೆ ಪ್ರಾಚ್ಯ ವಸ್ತು ಇಲಾಖೆಯ ಸೂಚನೆಯಂತೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಲಕ್ಕುಂಡಿಯ ಅದ್ಭುತ ಇತಿಹಾಸ ಅನಾವರಣಗೊಳಿಸುವ ಮೂಲಕ ಜಗತ್ತಿಗೆ ಪಸರಿಸುವ ಕಾರ್ಯ ಆಗಬೇಕಿದೆ. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಮಾಡಬೇಕೆಂದು ಸಚಿವ ಎಚ್.ಕೆ. ಪಾಟೀಲ ಸೂಚಿಸಿದರು.


Spread the love

LEAVE A REPLY

Please enter your comment!
Please enter your name here