ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳ ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಐಇಸಿ ಸಂಯೋಜಕ ಮಂಜುನಾಥ ಹಳ್ಳದ ಹೇಳಿದರು.
ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ವೈಯಕ್ತಿಕ ಕಾಮಗಾರಿಗಳ ವಿತರಣಾ ಮೇಳ ಹಾಗೂ ಬೇಡಿಕೆ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ನರೇಗಾ ಯೋಜನೆಯಲ್ಲಿ ಸಮುದಾಯ ಕಾಮಗಾರಿಯ ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ ತೋಟಗಾರಿಕೆ ಬೆಳೆಗಳಾದ ಪೇರಲ, ಹಿಪ್ಪುನೆರಳೆ, ಡ್ರ್ಯಾಗನ್, ಗುಲಾಬಿ, ಮಲ್ಲಿಗೆ, ಪಪ್ಪಾಯಿ, ನಿಂಬೆ, ಸೀತಾಫಲ, ಮಾವು, ಅಪೋಟಾ, ಸೀಬೆ, ದಾಳಿಂಬೆ, ಬಾಳೆ, ತೆಂಗು, ದ್ರಾಕ್ಷಿ, ವೀಳೆದೆಲೆ, ನೆಲ್ಲಿ, ಹುಣಸೆ, ಕರಿಬೇವು, ನುಗ್ಗೆ, ಕೃಷಿ ಇಲಾಖೆಯಿಂದ ಕೃಷಿಹೊಂಡ, ರೈತರ ಹೊಲದಲ್ಲಿ ಇಂಗು ಗುಂಡಿ ನಿರ್ಮಾಣ, ಕೋಳಿ ಶೆಡ್, ಬಚ್ಚಲು ಗುಂಡಿ, ಕುರಿ, ಮೇಕೆ ಶೆಡ್ ಹಾಗೂ ರೇಷ್ಮೆ, ಅರಣ್ಯ ಸೇರಿದಂತೆ ಅನುಷ್ಠಾನ ಇಲಾಖೆಯಡಿ ಇತರೆ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪಿಡಿಒ ಅಶೋಕ ಕಂಬಿ ಮಾತನಾಡಿ, ನರೇಗಾ ಯೋಜನೆಯಡಿಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಸಾಕಷ್ಟು ಸೌಲಭ್ಯಗಳು ಇವೆ. ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಲು ಒಬ್ಬ ರೈತರಿಗೆ 5 ಲಕ್ಷ ರೂ ವರೆಗೂ ನೆರವು ನೀಡಲಾಗುತ್ತದೆ. ತೋಟಗಾರಿಕೆ ಬೆಳೆಗಳ ಸೌಲಭ್ಯ ಪಡೆಯಲು ಕನಿಷ್ಠ 5 ಎಕರೆ ಒಳಗೆ ಜಮೀನು ಹೊಂದಿರಬೇಕು. ನೀರಾವರಿ ಇರಬೇಕು ಎಂದರು.
ಈ ವೇಳೆ ಲಕ್ಕಲಕಟ್ಟಿ ಗ್ರಾಪಂ ಕಾರ್ಯಾಲಯದ ನೋಟಿಸ್ ಬೋರ್ಡ್ಗೆ ನರೇಗಾ ಮಾಹಿತಿಯುಳ ಕರಪತ್ರ ಅಂಟಿಸಲಾಯಿತು. ಗ್ರಾಮದಲ್ಲಿ ಹಾಗೂ ತಾಂಡಾದಲ್ಲಿ ರೈತರು ಮಹಿಳೆಯರನ್ನು ಸೇರಿಸಿ ಸಭೆ ನಡೆಸಿ ವೈಯಕ್ತಿಕ ಕಾಮಗಾರಿಗಳ ಮಾಹಿತಿಯುಳ್ಳ ಕರಪತ್ರ ನೀಡಿ ಪ್ರಚಾರ ಮಾಡುವ ಮೂಲಕ ಬೇಡಿಕೆ ಸಂಗ್ರಹಿಸಲಾಯಿತು.
ಗ್ರಾಮ ಕಾಯಕ ಮಿತ್ರ ಸುಜಾತಾ ಮ್ಯಾಗೇರಿ, ತಾಂಡಾ ರೋಜಗಾರ ಮಿತ್ರ ಸಕ್ಕುಬಾಯಿ ರಾಠೋಡ, ಡಿಇಒ ಲಿಂಗರಾಜ ಹನಮಂತಪ್ಪ ಹಾಗೂ ಸಿಬ್ಬಂದಿಗಳು ರೈತರು ಮತ್ತು ಮಹಿಳೆಯರು ಭಾಗವಹಿಸಿದ್ದರು.



