ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಮನುಷ್ಯ ಆರೋಗ್ಯಕರ ಜೀವನ ನಡೆಸಬೇಕಾದರೆ ಸುತ್ತುಮುತ್ತಲಿನ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಪರಿಸರ ಸ್ವಚ್ಛವಾಗಿರಬೇಕಾದರೆ ತ್ಯಾಜ ವಸ್ತುಗಳನ್ನು ರಸ್ತೆಗಳಲ್ಲಿ ಎಸೆಯದೇ ಒಂದು ನಿರ್ದಿಷ್ಟ ಸ್ಥಳದಲ್ಲಿ ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು. ಅಂದಾಗ ಮಾತ್ರ ಪರಿಸರದ ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಬಡಿಗೇರ ಹೇಳಿದರು.
ತಾಲೂಕಿನ ಶಾಂತಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತೆಯೇ ಸೇವೆ-2024ರ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯಿಂದ ಗ್ರಾಮವನ್ನು ಸ್ವಚ್ಛಗೊಳಿಸುತ್ತಾರೆ. ಅವರೊಂದಿಗೆ ನೀವು ಕೈಜೋಡಿಸಿದರೆ ಗ್ರಾಮ ಸ್ವಚ್ಛವಾಗಿರುತ್ತದೆ. ಜೊತೆಗೆ ರೋಗಗಳಿಂದ ಮುಕ್ತವಾಗಿರಬಹುದು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಬಸನಗೌಡ ಪವಾಡಿಗೌಡ್ರ ಮಾತನಾಡಿ, ಮನೆ, ಮನೆಯಂಗಳವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಆರೋಗ್ಯಯುತ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.
ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಒಳಾಂಗಣದಲ್ಲಿ ಹರ್ಬಿಲ್ ಗಾರ್ಡನ್ ಮತ್ತು ನೈಸರ್ಗಿಕ ಗಾರ್ಡನ್ ನಿರ್ಮಾಣಕ್ಕೆ ತಾ.ಪಂ ಇಓ ಅವರಿಗೆ ಮನವಿ ಸಲ್ಲಿಸಿದರು. ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಲಮಾಣಿ, ಗ್ರಾ.ಪಂ ಉಪಾಧ್ಯಕ್ಷೆ ಅನುಸೂಯಾ ಶಿಗ್ಲಿ, ಸದಸ್ಯರಾದ ಶಂಕ್ರಪ್ಪ ಹಟ್ಟಿಮನಿ, ಭೀಮಪ್ಪ ಲಮಾಣಿ, ಹನುಮಂತ ಹುಲ್ಲೂರು, ಮೀನಾಕ್ಷಿ ಪತ್ತಾರ, ಜಯಶ್ರೀ ನಿಂಗಪ್ಪ ಜಾಲಿಹಾಳ, ಉತ್ತಪ್ಪ ಮಾದರ, ನೀಲವ್ವ ಶಿವಪ್ಪ ಪರಮಟ್ಟಿ, ಚಂದ್ರಶೇಖರ ನಾಗನೂರು, ಪಿಡಿಒ ಎಸ್.ಕೆ. ಕವಡೆಲಿ, ತಾ.ಪಂ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು, ಗ್ರಾ.ಪಂ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇತರರು ಇದ್ದರು.
ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಸಂಗ್ರಹಿಸುವ ಮೂಲಕ ಗ್ರಾಮದ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಶ್ರಮಿಸುತ್ತಿದೆ. ಅವರೊಂದಿಗೆ ಜನರು ಸಹಕರಿಸಿ ಕೈಜೋಡಿಸಿದಾಗ ಸುಂದರ ಗ್ರಾಮವನ್ನಾಗಿಸಬಹುದು. ಗ್ರಾಮ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಮಾತ್ರ ಗಾಂಧಿಜೀಯವರು ಕಂಡ ಕನಸು ನನಸಾಗಿಸಲು ಸಾಧ್ಯ ಎಂದು ಬಸವರಾಜ ಬಡಿಗೇರ ಹೇಳಿದರು.