ವಿಜಯಸಾಕ್ಷಿ ಸುದ್ದಿ, ಗದಗ : ಮಧ್ಯಮ ವರ್ಗದ ಜನರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಪೂರಕ ಸೇವೆಯಲ್ಲಿ ತನ್ನನ್ನು ಸಮರ್ಪಿಸಿಕೊಂಡಿರುವ ಗದುಗಿನ ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ. ಪ್ರಸಕ್ತ ವರ್ಷ 40 ಲಕ್ಷ 40 ಸಾವಿರ ರೂ.ಗಳ ನಿವ್ವಳ ಲಾಭ ಹೊಂದಿದ್ದು, ಶೇರುದಾರರಿಗೆ ಶೇ. 12ರಷ್ಟು ಡಿವಿಡೆಂಡ್ ನೀಡಲಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ ಹೇಳಿದರು.
ಅವರು ನಗರದ ಉಷಾದೇವಿ ಗೋವಿಂದರಾಜ ಕುಷ್ಟಗಿ ರೋಟರಿ ಕಮ್ಯೂನಿಟಿ ಕೇರ್ಸೆಂಟರ್ನಲ್ಲಿ ಏರ್ಪಡಿಸಿದ್ದ ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ವರದಿ ವರ್ಷದಲ್ಲಿ 112 ಕೋಟಿ 52 ಲಕ್ಷ 52 ಸಾವಿರ ರೂ.ಗಳಷ್ಟು ವಹಿವಾಟು ನಡೆಸಿದ್ದು ಕಳೆದ ಸಾಲಿನ ಅಂತ್ಯಕ್ಕೆ ದುಡಿಯುವ ಬಂಡವಾಳ 28 ಕೋಟಿ 62 ಲಕ್ಷ 68 ಸಾವಿರ ರೂ.ಗಳಿದ್ದು ವರದಿ ವರ್ಷದ ಅಂತ್ಯಕ್ಕೆ 30 ಕೋಟಿ 70 ಲಕ್ಷ 51 ಸಾವಿರ ರೂ.ಗಳಷ್ಟಾಗಿದೆ. ನಿರ್ದೆಶಕರು ಮತ್ತು ಆಡಳಿತ ಸಿಬ್ಬಂದಿಯವರ ಕಟ್ಟುನಿಟ್ಟಿನ ಕ್ರಮ, ದಕ್ಷ ಮತ್ತು ಪ್ರಾಮಾಣಿಕ ಕಾರ್ಯಗಳಿಂದಾಗಿ ಸಂಘವು ಸಾರ್ವಜನಿಕರ ವಿಶ್ವಾಸದೊಂದಿಗೆ ಪ್ರಗತಿಯಲ್ಲಿ ಮುನ್ನಡೆದಿದೆ ಎಂದರು.
ಗಾಯಕಿ ಸಂಗೀತಾ ಭರಮಗೌಡ್ರ ಪ್ರಾಥಿಸಿದರು. ಬಿ.ಎಮ್. ಹಳ್ಳಿಕೇರಿ ಸ್ವಾಗತಿಸಿದರು. ಅಢಾವೆ ಪತ್ರಿಕೆಯನ್ನು ಟಿ.ವ್ಹಿ. ಸಂಶಿ ಮಂಡಿಸಿದರು. ಜಗದೀಶ ಹುಡೇದ 2024-25ನೇ ಅಂದಾಜು ಆಯ-ವ್ಯಯ ಪತ್ರಿಕೆ ಮಂಡಿಸಿದರು. ಎಸ್.ಎಮ್ .ಸರ್ವಿ ಲಾಭ ವಿಂಗಡಣೆ ವಿವರಿಸಿದರು. ಬಸವರಾಜ ಹಳ್ಳಿಕೇರಿ ನಿರೂಪಿಸಿದರು. ಮಲ್ಲು ಬಡಿಗೇರ ವಂದಿಸಿದರು.
ವೇದಿಕೆಯ ಮೇಲೆ ಲೆಕ್ಕಪರಿಶೋಧಕರಾದ ಕೆ.ಎಸ್. ಚಟ್ಟಿ, ನಿರ್ದೆಶಕರಾದ ಮಹೇಶ ಗಾಣಿಗೇರ, ಎಮ್.ಬಿ. ಲಿಂಗದಾಳ, ಪ್ರಶಾಂತ ದೇಸಾಯಿಮಠ, ಗಿರಿಯಪ್ಪ ಗಾಣಿಗೇರ, ಕಳಕಪ್ಪ ನಾಗರಾಳ, ಸುರೇಶ ಸರ್ವಿ, ಗೀತಾ ಪಲ್ಲೇದ, ಸರೋಜಾ ಲಿಂಗದಾಳ, ಶೋಭಾ ಶಿವಕಾಳಿಮಠ, ಕವಿತಾ ದೇಸಾಯಿಮಠ ಉಪಸ್ಥಿತರಿದ್ದರು.
.
ಸಂಘದ ಅಧ್ಯಕ್ಷ ವ್ಹಿ.ಎಸ್. ಶಿವಕಾಳಿಮಠ ಮಾತನಾಡಿ, ಠೇವಣಿದಾರರ, ಶೇರುದಾರರ ಅಪಾರವಾದ ವಿಶ್ವಾಸದೊಂದಿಗೆ ಸಂಘವು 10 ವರ್ಷದ ತನ್ನ ಸೇವೆಯ ಅವಧಿಯಲ್ಲಿ ಜನಮನ್ನಣೆಗೆ ಪಾತ್ರವಾಗಿದೆ. ಜನಮುಖಿ, ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದೆ. ರಕ್ತದಾನ, ನೇತ್ರದಾನ, ಶಾಲಾ ಮಕ್ಕಳಿಗೆ ನೋಟ್ಪುಸ್ತಕ ವಿತರಣೆ, ಸಾಧಕರಿಗೆ ಸನ್ಮಾನ, ಬೀದಿಬದಿ ವ್ಯಾಪಾರಸ್ತರಿಗೆ ಮತ್ತು ಹಿರಿಯ ನಾಗರಿಕರಿಗೆ ಸಹಾಯ, 300ಕ್ಕೂ ಹೆಚ್ಚು ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಅವಕಾಶ ಸೃಷ್ಟಿ ಮಾಡಲಾಗಿದೆ ಎಂದರು.