ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕರವೇ ಪ್ರವೀಣಶೆಟ್ಟಿ ಬಣದ ಕಾರ್ಯಕರ್ತರ ನೇತೃತ್ವದಲ್ಲಿ ವಾರ್ಡ್ ನಂ-15 ರ ಗೋಸಾವಿ ಸಮಾಜದವರು ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಕ್ಕಾಗಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕರವೇ ಪ್ರವೀಣಶೆಟ್ಟಿ ಬಣದ ತಾಲೂಕಾಧ್ಯಕ್ಷ ಮಹೇಶ ಕಲಘಟಗಿ ಪಟ್ಟಣದ ಕೇಂದ್ರಭಾಗದಲ್ಲಿಯೇ ಅನೇಕ ವರ್ಷಗಳಿಂದ ಗುಡಿಸಲುಗಳಲ್ಲಿಯೇ ವಾಸಿಸುವ ಗೋಸಾವಿ ಸಮಾಜದ 30 ಕುಟುಂಬಗಳ ನೂರಾರು ಜನರು ಕುಡಿಯುವ ನೀರು, ಚರಂಡಿ, ವಿದ್ಯುತ್, ಶೌಚಾಲಯ ಸೇರಿ ಅಗತ್ಯ ಸೌಲಭ್ಯಗಳಿಲ್ಲದೇ ಅತ್ಯಂತ ಕೆಟ್ಟ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಈ ಪ್ರದೇಶದಲ್ಲಿ ವಾಸಿಸುವ ಗೋಸಾವಿ ಸಮಾಜದ ಜನರು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ.
2 ತಿಂಗಳಿಂದ ಜನತೆ ನೀರಿಗಾಗಿ ಪರದಾಡುತ್ತಿದ್ದಾರೆ. ಜನರ ಸಹನೆ, ತಾಳ್ಮೆಗೂ ಮಿತಿಯಿದೆ. ಈ ಬಗ್ಗೆ ಪುರಸಭೆ, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಪುರಸಭೆ ಉಪಾಧ್ಯಕ್ಷ ಫಿರ್ದೋಸ್ ಆಡೂರ ಮನವಿ ಸ್ವೀಕರಿಸಿದರು. ಈ ವೇಳೆ ಬಾಳಪ್ಪ ಗೋಸಾವಿ, ದಾದಪ್ಪ ಗೋಸಾವಿ, ನಿಖಿಲ ಗೋಸಾವಿ, ಹರೀಶ ಗೋಸಾವಿ, ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರಾದ ಮಂಜುನಾಥ ಗಾಂಜಿ, ಅಮರೀಶ ಗಾಂಜಿ, ಶ್ರೇಯಾಂಕ ಹಿರೇಮಠ, ಭರಮಣ್ಣ ಗೌಳಿ, ಚಂದ್ರು ಪಾಣಿಗಟ್ಟಿ, ಪ್ರವೀಣ ದಶಮನಿ, ನವೀನ ಗುರಿಕಾರ, ಮುರಳೀಧರ ಮಲ್ಲಸಮುದ್ರ ಸೇರಿ ಗೋಸಾವಿ ಸಮಾಜದ ಮಹಿಳೆಯರು ಪಾಲ್ಗೊಂಡಿದ್ದರು.