ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಎಸ್ಎಸ್ಕೆ ಸಮಾಜ ಚಿಕ್ಕ ಸಮಾಜವಾದರೂ ಎಲ್ಲರೊಂದಿಗೆ, ಇತರೆ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಜೀವನ ಸಾಗಿಸುತ್ತಿದ್ದಾರೆ. ಅದರ ಜೊತೆಗೆ ಸಮಾಜದ ಸಂಘಟನೆ ಮಾಡುತ್ತಾ ಸಮಾಜದ ಎಲ್ಲರೂ ಬೆಳೆಯುವದು ಅವಶ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ, ಬಾಗಲಕೋಟೆಯ ನಾರಾಯಣಸಾ ಭಾಂಡಗೆ ಅವರು ಹೇಳಿದರು.
ಅವರು ಪಟ್ಟಣದ ಶ್ರೀ ಅಂಭಾಭವಾನಿ ದೇವಸ್ಥಾನದಲ್ಲಿ ಎಸ್ಎಸ್ಕೆ ಸಮಾಜದ ವತಿಯಿಂದ ನವರಾತ್ರಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾಜದ ವತಿಯಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಪ್ರದಾಯಗಳನ್ನು ಕಲಿಸುವದ ಜೊತೆಗೆ ಸಮಾಜದ ಧಾರ್ಮಿಕ ಕಾರ್ಯಗಳಲ್ಲಿ ಮಕ್ಕಳು, ಯುವಕರು, ಯುವತಿಯರು ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡುವದು ಅವಶ್ಯವಾಗಿದೆ. ಎಸ್ಎಸ್ಕೆ ಸಮಾಜದವನಾಗಿ ರಾಜ್ಯಸಭಾ ಸದಸ್ಯನಾಗಿರುವದಕ್ಕೆ ದೇವಿಯ ಆಶೀರ್ವಾದ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಸಮಾಜ ಸಂಘಟನೆಗೆ ಇನ್ನಷ್ಟು ಒತ್ತು ನೀಡಿ ಸರಕಾರದ ಸವಲತ್ತುಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲರೂ ಸಂಘಟಿತರಾಗಿ ಸಮಾಜವನ್ನು ಗಟ್ಟಿಗೊಳಿಸಬೇಕು. ಮಕ್ಕಳಿಗೆ ಸಂಸ್ಕಾರ ಮನೆಯಿಂದಲೇ ಆರಂಭವಾಗಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚು ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಪರಶುರಾಮಸಾ ಬದಿ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಎಸ್ಕೆ ಪ್ರಾಂತೀಯ ಅಧ್ಯಕ್ಷ ಡಾ.ಶಶಿಕುಮಾರ ದಾನಿ, ಶಾಸಕ ಡಾ. ಚಂದ್ರು ಲಮಾಣಿ, ಉಪಾಧ್ಯಕ್ಷ ನಾರಾಯಣಸಾ ಪವಾರ, ಲಕ್ಷ್ಮಣಸಾ ರಾಜೋಳಿ, ತಿಪ್ಪಣ್ಣ ಬಾಕಳೆ, ಯಲ್ಲಪ್ಪ ಬದಿ, ಪರಶುರಾಮ ಬದಿ, ತುಕಾರಾಮ ಬದಿ, ಪಾಂಡುಸಾ ಬದಿ, ವಿಠ್ಠಲ್ಸಾ ಸಿದ್ಲಿಂಗ, ಛಾಯಪ್ಪ ಬದಿ, ಆನಂದಸಾ ಬದಿ, ಗಣಪತಸಾ ಪೂಜಾರಿ, ತರುಣ ಸಂಘದ ಅಧ್ಯಕ್ಷ ಭರತ ಬಾಕಳೆ, ಮಂಜುನಾಥ ಬದಿ, ಕಿರಣ ಬದಿ, ವಿನಾಯಕ ರಾಜೋಳಿ, ಗಣೇಶ ಬದಿ, ಆನಂದ ಹಬೀಬ ಸೇರಿದಂತೆ ಸಮಾಜದ ಅನೇಕ ಮುಖಂಡರು, ತರುಣ ಸಂಘದ ಸದಸ್ಯರು ಹಾಜರಿದ್ದರು.
ಎಸ್ಎಸ್ಕೆ ಸಮಾಜದ ರಾಜ್ಯ ಅಧ್ಯಕ್ಷ ಡಾ. ಶಶಿಕುಮಾರ ಮೆಹರವಾಡೆ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ನವರಾತ್ರಿ ನವದುರ್ಗೆಯರ ಆರಾಧನೆ ಮಾಡುವ ಶುಭ ದಿನಗಳಾಗಿವೆ. ನಮ್ಮಲ್ಲಿರುವ ದುರ್ಗುಣಗಳನ್ನು ಅಳಿಸಿ ಒಳ್ಳೆಯ ಗುಣಗಳನ್ನು ಬೆಳೆಸುವಂತೆ ದೇವಿಯಲ್ಲಿ ಎಲ್ಲರೂ ಪ್ರಾರ್ಥಿಸಬೇಕು. 9 ದಿನಗಳ ಕಾಲ ದೇವಿಯ ಆರಾಧನೆ ಜೊತೆಗೆ ಬಂಧು-ಬಾಂಧವರ, ಸ್ನೇಹಿತರ, ಇತರೆ ವರ್ಗದವರ ಜೊತೆ ಬನ್ನಿಯನ್ನು ವಿನಿಮಯ ಮಾಡಿಕೊಂಡು ಸಹಬಾಳ್ವೆ ನಡೆಸುವಂತೆ ಸಾರುವ ಈ ಹಬ್ಬ ಸಕಲರಿಗೂ ಒಳ್ಳೆಯದನ್ನು ಮಾಡಲಿ, ಸಮಾಜ ಸಂಘಟನೆಗೆ ಎಲ್ಲರೂ ಒಂದಾಗಿ ಎಂದು ಕರೆನೀಡಿದರು.