ವಿಜಯಸಾಕ್ಷಿ ಸುದ್ದಿ, ರೋಣ : ತಾಲೂಕಿನ ಅಬ್ಬಿಗೇರಿಯಲ್ಲಿ ಕಳೆದ 10 ದಿನಗಳ ಕಾಲ ರಂಭಾಪುರಿ ಪೀಠದ ಆಶ್ರಯದಲ್ಲಿ ನಡೆದ ಧರ್ಮ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದೆ. ಇದಕ್ಕೆ ಇಲ್ಲಿನ ಜನಗಳ ನಡುವಿನ ಧರ್ಮ ಸಮನ್ವಯತೆಯೇ ಕಾರಣ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹರ್ಷ ವ್ಯಕ್ತಪಡಿಸಿದರು.
ಸಮೀಪದ ಅಬ್ಬಿಗೇರಿಯಲ್ಲಿ ಜಗದ್ಗುರುಗಳ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ರಂಭಾಪುರಿ ಪೀಠದ ದಸರಾ ದರ್ಬಾರ್ ಧರ್ಮ ಸಮ್ಮೇಳನ ವರ್ಷದಿಂದ ವರ್ಷಕ್ಕೆ ದಾಖಲೆ ಪ್ರಮಾಣದಲ್ಲಿ ಯಶಸ್ವಿಯಾಗುತ್ತಿದೆ. ಧರ್ಮ ಸಮ್ಮೇಳನ ಎಲ್ಲ ಜಾತಿ, ಜನಾಂಗದ ಭಾವನೆಗೆ ಸ್ಪಂದಿಸಿ ಸಂತೋಷವನ್ನುಂಟುಮಾಡುವಲ್ಲಿ ಯಶಸ್ವಿಯಾಗಿದೆ. ಗ್ರಾಮೀಣ ಭಾಗದಲ್ಲಿ ಇದೇ ಪ್ರಥಮ ಬಾರಿಗೆ ದಸರಾ ದರ್ಬಾರ್ ಹಮ್ಮಿಕೊಂಡಿದ್ದು, ಅದು ಹೇಗೆ ನಡೆಯಲಿದೆ ಎಂಬ ಆತಂಕ ಭಕ್ತರಲ್ಲಿತ್ತು. ಆದರೆ, ಅಬ್ಬಿಗೇರಿ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಸಮ್ಮೇಳನವನ್ನು ಯಶಸ್ವಿಗೊಳಿಸುವ ಮೂಲಕ ಎಲ್ಲ ಆತಂಕಗಳಿಗೆ ಪೂರ್ಣ ವಿರಾಮ ನೀಡಿದ್ದಾರೆ ಎಂದರು.
ಅಬ್ಬಿಗೇರಿಯ ದಸರಾ ದರ್ಬಾರ್ ಎಲ್ಲ ದರ್ಬಾರ್ಗಳಿಗಿಂತ ವಿಶೇಷವಾಗಿದ್ದು, ಇತರರಿಗೆ ಮಾದರಿಯಾಗಿದೆ.
ದಸರಾ ದರ್ಬಾರ್ ಅತ್ಯಂತ ಯಶಸ್ವಿಯಾಗಲು ಇಲ್ಲಿನ ಧರ್ಮ-ಧರ್ಮಗಳ ಮತ್ತು ವ್ಯಕ್ತಿ-ವ್ಯಕ್ತಿಗಳ ನಡುವೆ ಇರುವ ಸಾಮರಸ್ಯದಿಂದ ಸಾಧ್ಯವಾಯಿತು. ಧರ್ಮವೂ ಸೇರಿದಂತೆ ಕಲೆ, ಸಾಹಿತ್ಯ, ಸಂಗೀತ, ವಿವಿಧ ಕ್ಷೇತ್ರಗಳ ಪರಿಚಯ ಮಾಡುವ ಕಾರ್ಯ ಅತ್ಯಂತ ಯಶಸ್ವಿಯಾಗಿದೆ. ಧರ್ಮ, ಸಂಸ್ಕೃತಿ ಮತ್ತು ಸಾತ್ವಿಕ ಸಮಾಜ ನಿರ್ಮಾಣದ ಕಾರ್ಯವನ್ನು ಈ ಧರ್ಮ ಸಮ್ಮೇಳನವು ಅತ್ಯಂತ ಪ್ರಾಮಾಣಿಕತನದಿಂದ ಯಶಸ್ವಿಯಾಗಿ ಮಾಡಿಕೊಂಡು ಬಂದಿದೆ ಎಂದರು.
ಸಿದ್ದರಬೆಟ್ಟ-ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಶಾಸಕ ಜಿ.ಎಸ್. ಪಾಟೀಲ, ಅಂದಪ್ಪ ವೀರಾಪೂರ, ಭರಮಪ್ಪ ಹನುಮನಾಳ, ಬಾಬುಗೌಡ ಪಾಟೀಲ, ಸುರೇಶ ನಾಯ್ಕರ, ವಿಜಯಕುಮಾರ ಹಿರೇಮಠ, ಮಂಜುನಾಥ ಹಿರೇಮಠ, ಬಿ.ವಿ. ನೀರಲೋಟಿ, ಎಚ್.ಟಿ. ದ್ವಾಸಲ ಮುಂತಾದವರಿದ್ದರು.
ಇಲ್ಲಿನ ಪ್ರಸಾದ ಸೇವೆಯ ಅಚ್ಚುಕಟ್ಟುತನ ವಿಶೇಷವಾಗಿತ್ತು. ಪ್ರಸಾದಕ್ಕಾಗಿ ಮುಸ್ಲಿಂ ಸಮಾಜದ ಬಾಂಧವರೂ ಸಹ 8 ಕ್ವಿಂಟಲ್ ಗೋಧಿ ಹಿಟ್ಟಿನ ಚಪಾತಿ ಮಾಡಿಕೊಟ್ಟು, ಸಮಾರಂಭದಲ್ಲಿ ಪಾಲ್ಗೊಂಡಿದ್ದು ಈ ಸಮ್ಮೇಳನದ ವೈಶಿಷ್ಟ್ಯಗಳಲ್ಲಿ ಒಂದು. ಈ ಸಮನ್ವಯತೆ ಎಲ್ಲರಲ್ಲಿಯೂ ಎಂದಿಗೂ ಹೀಗೇ ಇರಲಿ ಎಂದು ಜಗದ್ಗರುಗಳು ಅಪ್ಪಣೆ ಕೊಡಿಸಿದರು.