ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ವಿದೇಶಗಳಲ್ಲಿ ಬುದ್ಧಿಗೆ ಮಹತ್ವ ನೀಡಿದರೆ, ನಮ್ಮ ಭಾರತದಲ್ಲಿ ಹೃದಯವಂತಿಕೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದು ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದು ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಪಟ್ಟಣದ ನವನಗರದಲ್ಲಿನ ಹಂಪಸಾಗರ ನವಲಿ ಕಟ್ಟಿಮನಿ ಸಂಸ್ಥಾನ ಹಿರೇಮಠದಲ್ಲಿ ಶ್ರೀಮಠದ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯನಲ್ಲಿ ವೈಭವದ ಜೀವನಕ್ಕೆ ಬೇಕಾಗುವ ಎಲ್ಲ ಸಂಪತ್ತು ಇದೆ. ಆದರೆ ಜೀವನದಲ್ಲಿ ನೆಮ್ಮದಿಯಿಲ್ಲ. ಏಕೆಂದರೆ ಮಠ-ಮಂದಿರದ ಪರಂಪರೆಯನ್ನು ನಾವು ಮರೆಯುತ್ತಿದ್ದೇವೆ. ಅದಕ್ಕೆ ಎಷ್ಟೇ ಆಸ್ತಿ ಇದ್ದರೂ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತಿಲ್ಲ. ಮನುಷ್ಯನಲ್ಲಿ ಸಂಸ್ಕೃತಿ, ಸಂಸ್ಕಾರ ಬರಬೇಕಾದರೆ ಮಠ-ಮಂದಿರಕ್ಕೆ ಹೋಗಬೇಕು. ಆಗ ಮಾತ್ರ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯ. ಭಾರತ ಭಕ್ತಿ ಮತ್ತು ಧರ್ಮ ಪ್ರಧಾನ ದೇಶವಾಗಿದೆ. ದೇಶದ ಜನ ದೇವರ ಮತ್ತು ಧರ್ಮದ ಮೇಲೆ ಅಚಲವಾದ ಶ್ರದ್ಧೆ ಇಟ್ಟಿದ್ದಾರೆ ಎಂದರು.
ಹಂಪಸಾಗರ-ನರೇಗಲ್ಲ ನವಲಿ ಹಿರೇಮಠದ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಡಾ. ಮಲ್ಲಯ್ಯ ಚಪ್ಪನ್ನಮಠ, ಪ.ಪಂ ಮಾಜಿ ಅಧ್ಯಕ್ಷ ಉಮೇಶ ಸಂಗನಾಳಮಠ, ಕಲ್ಮೇಶ ತೊಂಡಿಹಾಳ, ಉಮೇಶ ಉಮಚಗಿ, ಮಲ್ಲನಗೌಡ ಭೂಮನಗೌಡ್ರ, ಶಿವಪುತ್ರಪ್ಪ ಸಂಗನಾಳ, ಮುತ್ತಪ್ಪ ಹಡಪದ, ಈರಣ್ಣ ಗುಜಮಾಗಡಿ, ಮುತ್ತಣ್ಣ ಪಾಯಪ್ಪಗೌಡ್ರ, ಮಹಾದೇವಸ್ವಾಮಿ ನವಲಿಹಿರೇಮಠ ಸೇರಿದಂತೆ ಇತರರಿದ್ದರು.