ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀ ಸೋಮನಾಥನಿಗೆ ವಿಶೇಷ ಪೂಜಾ ಕೈಂಕರ್ಯಗಳು ಕಳೆದ 9 ದಿನಗಳ ಕಾಲ ನಡೆದವು.
ವಿಜಯದಶಮಿ ದಿನ ಶನಿವಾರ ಸಂಪಾತಲೇ ಪರಾಕ್ ಎಂದು ಕಾರಣಿಕ ವಾಣಿ ಮೊಳಗಿ ಭಕ್ತರು ಹರ್ಷೋದ್ಘಾರ ವ್ಯಕ್ತಪಡಿಸಿದರು.
ಪಟ್ಟಣದ ಮ್ಯಾಗೇರಿ ಓಣಿಯ ಬೀರೇಶ್ವರ, ಕಡಕೋಳ ಸಿದ್ದೇಶ್ವರ, ಮೈಲಾರಲಿಂಗೇಶ್ವರ, ಹೊನಕೇರಿ ಮಲ್ಲಯ್ಯ, ವೀರಭದ್ರೇಶ್ವರ, ಯಲ್ಲಮ್ಮದೇವಿ, ಹನುಮಂತದೇವರ ಸೇರಿದಂತೆ ಪಟ್ಟಣದ ಎಲ್ಲ ದೇವಸ್ಥಾನದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ಇರಿಸಿ ವಾದ್ಯಗಳೊಂದಿಗೆ ಪಟ್ಟಣದ ಹೊರವಲಯದ ದೇವಸ್ಥಾನಗಳಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿಸಲಾಯಿತು. ದಕ್ಷಿಣ ದ್ವಾರದ ಬಳಿ ವೀರಭದ್ರ ದೇವರ ವಡಪುಗಳನ್ನು ಹೇಳಲಾಯಿತು.
ತಡರಾತ್ರಿ ಮ್ಯಾಗೇರಿ ಓಣಿಯ ಹೊನಕೇರಿ ಮಲ್ಲಯ್ಯನ ದೇವಸ್ಥಾನದಲ್ಲಿ ಕಬ್ಬಿಣದ ಸರಪಳಿ ಹರಿಯುವ ಸಂಪ್ರದಾಯದ ಪವಾಡವನ್ನು ಗೊರಪ್ಪಜ್ಜ ನೀಲಪ್ಪ ಕೋರಿ ನೆರವೇರಿಸಿದರು.
ರಾತ್ರಿ ಸೋಮೇಶ್ವರ ದೇವರ ಪಾದಗಟ್ಟಿ ಹತ್ತಿರ ಸೇರಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿಯುವ ನಾಗಪ್ಪ ಬಿಂಗಿ ಅವರು ಮುಳ್ಳಿನ ಆವಿಗೆ ಮೇಲೆ ನಿಂತು, ಸದ್ದಲೇ ಎಂದಾಗ ಇಡಿ ಜನಸ್ತೋಮ ಶಾಂತವಾಯಿತು.
ದಸರಾ ಹಬ್ಬದಲ್ಲಿ 9 ದಿನಗಳಿಂದ ಹಣ್ಣು, ಹಾಲು ಸೇವಿಸಿ ಉಪವಾಸ ವ್ರತಾಚರಣೆ ಮಾಡಿ ಕಾರಣಿಕ ದಿನದಂದು ಮುಳ್ಳಿನ ಆವಿಗೆ ಮೇಲೆ ನಿಂತು ಕಾರಣಿಕ ನುಡಿಯುವದು ಇಲ್ಲಿನ ಸಂಪ್ರದಾಯವಾಗಿದೆ. ಈ ಬಾರಿ `ಸಂಪಾತಲೇ ಪರಾಕ್’ ವಾಣಿ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ದೇವಸ್ಥಾನದ ಅರ್ಚಕರು, ಸೋಮೇಶ್ವರ ಸೇವಾ ಟ್ರಸ್ಟ್ ಕಮಿಟಿ, ಜಾತ್ರಾ ಕಮೀಟಿ ಹಾಗೂ ಹಿರಿಯರು ಮುಖಂಡರು ಪಾಲ್ಗೊಂಡಿದ್ದರು.