ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಕರು ಮಕ್ಕಳಿಗೆ ವೈಯುಕ್ತಿಕ ಕಾಳಜಿ, ಪ್ರೀತಿಯಿಂದ ಕೂಡಿದ ಬೋಧನೆ ನೀಡಬೇಕು. ಅದು ವಾತ್ಸಲ್ಯಮಯ ಹಾಗೂ ಹೃದಯಕ್ಕೆ ಕೊಡುವ ಶಿಕ್ಷಣವಾಗಿರಬೇಕೆಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಾ ತಾಪಸ್ಕರ್ ಹೇಳಿದರು.
ಅವರು ಬುಧವಾರ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಪನ್ಮೂಲ ಕೇಂದ್ರದಲ್ಲಿ ಜರುಗಿದ ಸಂಪನ್ಮೂಲ ವ್ಯಕ್ತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾವು ಮಕ್ಕಳಿಗೆ ನೀಡುವ ಶಿಕ್ಷಣವು ಮಕ್ಕಳ ಭಾವಕೋಶ ಹಾಗೂ ಜ್ಞಾನಕೋಶದ ವಿಸ್ತರಣೆಯ ಪ್ರಗತಿಗೆ ಪೂರಕವಾಗಿರಲಿ. ಅನುಭವಾತ್ಮಕ ಹಾಗೂ ಸೃಜನಶೀಲತೆ ಬೆಳೆಸುವಂತಹ ಕಾರ್ಯದಲ್ಲಿ ಸಂಪನ್ಮೂಲ ವ್ಯಕ್ತಿಗಳು ಶಿಕ್ಷಕ ಬಳಗಕ್ಕೆ ಮಾರ್ಗದರ್ಶನ ನೀಡಬೇಕೆಂದರು.
ಗದಗ ಡೈಟ್ ಉಪನ್ಯಾಸಕಿ ಸುಧಾ ಬೆನಕಲ್ಲ ಮಾತನಾಡಿ, ಪ್ರತಿ ದಿನ ಶಾಲೆಗಳಿಗೆ ಭೇಟಿ ನೀಡಿ ಕಾರ್ಯ ವೈಖರಿ ಮಾಹಿತಿಯನ್ನು ಶಾಲಾ ಶಿಕ್ಷಕರಿಗೆ ತಲುಪಿಸುವದು ಸಂಪನ್ಮೂಲ ವ್ಯಕ್ತಿಗಳ ಕಾರ್ಯಪ್ರವೃತ್ತಿ. ಸ್ಪೂರ್ತಿದಾಯಕವಾದ ಮಾತುಗಳು ಕೆಲಸಕ್ಕೆ ಪ್ರೇರಣೆ ನೀಡುತ್ತವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಆರ್ಪಿ ಎಂ.ಎ. ಯರಗುಡಿ, ಶಾಲಾ ಭೇಟಿಯು ಒಂದು ಸುಗಮಗಾರಿಕೆ ಆಗಿದೆ. ನಾವು ಸುಗಮಕಾರರು. ಇಲಾಖೆಯ ಆದೇಶಗಳನ್ನು ಶಿಕ್ಷಕ ಬಳಗಕ್ಕೆ ತಲುಪಿಸಿ ಸೂಕ್ತ ಮಾರ್ಗದರ್ಶನ ತೋರುವ ಕೆಲಸ ನಮ್ಮದಾಗಿದೆ ಎಂದರು.
20 ವರ್ಷಗಳಿಂದ ವೃತ್ತಿ ನಿರತ ಶಿಕ್ಷಕರಿಗೆ ನೀಡುತ್ತಿರುವ ಇಲಾಖೆಯ ತರಬೇತಿ ಸಾಹಿತ್ಯವನ್ನು ಪ್ರತಿದಿನ ಪರಿಚಯಿಸುತ್ತಿರುವ ಹಿರಿಯ ಬಿಆರ್ಪಿ ಪ್ರಕಾಶ ಮಂಗಳೂರು ಹಾಗೂ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಕೆ.ಎಸ್. ಬೇಲೇರಿ ಅವರನ್ನು ಸನ್ಮಾನಿಸಲಾಯಿತು.
ಸುಮಾ ಹಚಡದ ಪ್ರಾರ್ಥಿಸಿದರು. ಇಸಿಓ ಮುರಳಿ ಸೋಲ್ಲಾಪೂರ ಸ್ವಾಗತಿಸಿದರು. ಶ್ಯಾಮ್ ಲಾಂಡೆ ನಿರೂಪಿಸಿದರು. ರವಿ ಹೆಬ್ಬಳ್ಳಿ ವಂದಿಸಿದರು. ವಿದ್ಯಾ ಗಡ್ಯಾಳೆ, ತನು ಹೂಗಾರ, ಶಿಲ್ಪಾ ಹಳ್ಳಿಕೇರಿ, ಡಿ.ಟಿ. ಬೇವಿನಮರದ, ಎಸ್.ವ್ಹಿ. ಕಂಚಗಾರ, ಎಸ್.ಸಿ. ಹಿರೇಮಠ, ಕೆ.ಎ. ಜಲಿಗೇರಿ ತಮ್ಮ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಪ್ರಗತಿಗಳನ್ನು ವಿವರಿಸಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡಿ, ವಿದ್ಯಾರ್ಥಿಗಳ ಬದುಕಿನಲ್ಲಿ ಮೌಲ್ಯಗಳನ್ನು ಬಿತ್ತುವ ಕಾರ್ಯ ಶಿಕ್ಷಣದ್ದಾಗಿದೆ. ಶಿಕ್ಷಕ ಬಳಗಕ್ಕೂ ವಿದ್ಯಾರ್ಥಿಗಳಿಗೂ ಆತ್ಮೀಯ ಸಂಬಂಧವಿದೆ. ನಾವು ಕುಟುಂಬ ಪರಿವಾರದ ರೀತಿಯಲ್ಲಿ ಬೋಧನೆಗೆ ತೊಡಗಿದಾಗ ಕಲಿಕೆ ಫಲಪ್ರದವಾಗುವದು ಎಂದರು.
Advertisement