ವಿಜಯಸಾಕ್ಷಿ ಸುದ್ದಿ, ಗದಗ: ಭಗವದ್ಗೀತೆಯನ್ನು ನೂರಾರು ವರ್ಷಗಳಿಂದ ಅನೇಕ ವಿದ್ವಾಂಸರು ಅಧ್ಯಯನ ಮಾಡಿ ತಮ್ಮದೇ ವಿಧಾನದಲ್ಲಿ ಅರ್ಥೈಸಿದ್ದು, ಭಗವದ್ಗೀತೆಯ ಪ್ರತಿ ಅಧ್ಯಯನದಲ್ಲೂ ಹೊಸ ವ್ಯಾಖ್ಯಾನ ಸಿಗುತ್ತದೆ ಎಂದು ಪ್ರವಚನ ಭಾಸ್ಕರ ಡಾ. ಪಾವಗಡ ಪ್ರಕಾಶ್ ರಾವ್ ನುಡಿದರು.
ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತಾ ಪ್ರವಚನದ 11ನೇ ದಿನದ ಪ್ರವಚನ ನೀಡಿ ಮಾತನಾಡುತ್ತಿದ್ದರು.
ಮೋಕ್ಷಕ್ಕಾಗಿ ತಪಸ್ಸು ಅನಿವಾರ್ಯವಾಗಿದ್ದು, ರಾಮಾಯಣವು ಆರಂಭವಾಗುವುದೇ ತಪಸ್ಸು ಎನ್ನುವ ಪದದಿಂದ. ಅದೇ ರೀತಿ ವರ್ಧತಾಂ ಎನ್ನುವ ಪದದಿಂದ ಮುಕ್ತಾಯವಾಗುತ್ತದೆ. ಎರಡೂ ಪದಗಳನ್ನು ಸೇರಿಸಿದರೆ ತಪಸ್ಸನ್ನು ವೃದ್ಧಿಸಿ ಎಂದು ವೇದ್ಯವಾಗುತ್ತದೆ.
ಮೊಘಲ್ ದೊರೆ ಷಹಜಹಾನ್ ಮಗನಾದ ದಾರಾಶಿಖೊ ಓರ್ವ ಮುಸ್ಲಿಂ ದೊರೆಯಾಗಿದ್ದರೂ ಸಹ ಉಪನಿಷತ್ತುಗಳನ್ನು ಮೊದಲ ಬಾರಿಗೆ ಪರ್ಷಿಯನ್ ಭಾಷೆಗೆ ಪಂಡಿತರಿAದ ಅನುವಾದ ಮಾಡಿಸಿದನು. ಪರಿಣಾಮವಾಗಿ ಮುಂದೆ ಲ್ಯಾಟಿನ್ ಭಾಷೆ ಅದೇ ರೀತಿ ಆಂಗ್ಲ ಭಾಷೆಗೂ ಉಪನಿಷತ್ತುಗಳು ಅನುವಾದವಾಗಿ ಜಗತ್ತಿನಾದ್ಯಂತ ಪಸರಿಸಿದವು. ಹಿಂದೂ ದೇವತೆಗಳ ಬಗ್ಗೆ ತಾತ್ಸಾರ ಭಾವನೆ ಹೊಂದಿದ್ದ ರಾಜಾರಾಂ ಮೋಹನ್ ರಾಯ್ ಅವರೂ ಸಹ ಅನುವಾದಿತ ಉಪನಿಷತ್ತುಗಳನ್ನು ಓದಿ ಬ್ರಹ್ಮ ಸಮಾಜ ಕಟ್ಟಿದರು.
ಭಾರತೀಯ ಪರಂಪರೆಯನ್ನು ನಾಶಮಾಡುವ, ಅದರ ಕುರಿತು ಕೀಳರಿಮೆ ಹುಟ್ಟುಹಾಕುವ ಕೆಲಸಗಳು ನಡೆಯುತ್ತಿರುವುದು ಕಳವಳಕಾರಿಯಾಗಿದ್ದು, ಭಾರತೀಯರು ಪ್ರಪಂಚದಲ್ಲೇ ಬುದ್ಧಿವಂತರಾಗಿದ್ದರೂ ವಿದೇಶಿಗರು ಭಾರತೀಯ ಜ್ಞಾನ ಉಚ್ಛಾçಯ ಸ್ಥಿತಿಗೆ ಏರುವುದನ್ನು ಸಹಿಸುವುದಿಲ್ಲ ಎಂದರು.
ಡಾ.ಕಲ್ಲೇಶ ಮೂರಶಿಳ್ಳಿನ ನಿರೂಪಿಸಿ ವಂದಿಸಿದರು. ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಡಾ. ಎಸ್.ಎಸ್. ಶೆಟ್ಟರ್, ಡಾ. ಜಿ.ಬಿ. ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ. ಯರಿಗೇರಿ, ಡಾ. ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ. ಹಿರೇಮಠ, ಡಾ. ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.