ಆಸ್ಕರ್ ಪ್ರಶಸ್ತಿ ವಿಜೇತ ಸಂಯೋಜಕ ಮತ್ತು ಗಾಯಕ ಎ. ಆರ್. ರೆಹಮಾನ್ ಪತ್ನಿ ಸಾಯಿರಾ ಬಾನು ಅವರಿಗೆ ವಿಚ್ಛೇದನ ನೀಡಿದ್ದಾರೆ. ಈ ಮೂಲಕ 29 ವರ್ಷಗಳ ದಾಂಪತ್ಯ ಜೀವನ ಕೊನೆಯಾಗಿಸಿದ್ದಾರೆ. ಅಲ್ಲದೆ ಸೈರಾ ಬಾನು ಸೋಷಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಸುದ್ದಿ ತಿಳಿಸುತ್ತಿದ್ದಂತೆ ರೆಹಮಾನ್ ಅವರ ಬ್ಯಾಂಡ್ ನ ಸದಸ್ಯೆ ಮೋಹನಿ ಡೇ ಕೂಡ ತಮ್ಮ ಪತಿಗೆ ಡಿವೋರ್ಸ್ ನೀಡಿರುವುದಾಗಿ ಹೇಳಿದ್ದಾರೆ. ಹಾಗಾಗಿ ರೆಹಮಾನ್ ಸೈರಾಬಾನು ದೂರ ದೂರವಾಗಲು ಮೋಹಿನಿ ಕಾರಣ ಎಂದು ಕೆಲವರು ಸುದ್ದಿ ಹಬ್ಬಿಸಿದ್ದರು. ಇದೀಗ ಸೈರಾ ತಮ್ಮ ಪಿಆರ್ ಮೂಲಕ ವಾಯ್ಸ್ ನೋಟ್ ಬಿಡುಗಡೆ ಮಾಡಿ ತಮ್ಮ ಪತಿಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಸೈರಾ ಬಾನು ಕೆಲವು ದಿನಗಳಿಂದ ಚಿಕಿತ್ಸೆಗಾಗಿ ಮುಂಬೈನಲ್ಲಿದ್ದಾರೆ. ‘ಎಆರ್ ರೆಹಮಾನ್ ಓರ್ವ ವ್ಯಕ್ತಿಯಾಗಿ ವಜ್ರ ಇದ್ದಂತೆ. ಅವರು ಈ ಜಗತ್ತಿನಲ್ಲಿ ಅತ್ಯುತ್ತಮ ವ್ಯಕ್ತಿ. ನನ್ನ ಆರೋಗ್ಯ ಸಮಸ್ಯೆಯಿಂದಾಗಿ ನಾನು ಚೆನ್ನೈ ಬಿಟ್ಟು ಹೋಗಬೇಕಾಯಿತು. ಅವರ ವಿರುದ್ಧ ಕೆಟ್ಟದ್ದನ್ನು ಹೇಳಬೇಡಿ ಎಂದು ನಾನು ಯೂಟ್ಯೂಬ್ಗಳು ಮತ್ತು ತಮಿಳು ಮಾಧ್ಯಮಗಳಲ್ಲಿ ವಿನಂತಿಸುತ್ತೇನೆ. ನನ್ನ ಜೀವನದಲ್ಲಿ ನಾನು ಅವನನ್ನು ಹೆಚ್ಚು ನಂಬಿದ್ದೇನೆ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಅವರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಹಾಗಾಗಿ ಅವರ ಮೇಲೆ ಸುಳ್ಳು ಆರೋಪ ಮಾಡಬೇಡಿ’’ ಎಂದು ಸೈರಾ ಮನವಿ ಮಾಡಿದ್ದಾರೆ.
ಚಿಕಿತ್ಸೆ ಮುಗಿಸಿ ಚೆನ್ನೈಗೆ ಮರಳುವವರೆಗೂ ಕಾಯುವಂತೆ ಅವರು ಕೋರಿದ್ದಾರೆ. ‘ನಾವು ಇನ್ನೂ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ. ಅವರ ಹೆಸರನ್ನು ಹಾಳು ಮಾಡಬೇಡಿ. ಇದೆಲ್ಲ ತುಂಬಾ ಮೂರ್ಖತನ. ರೆಹಮಾನ್ ವಜ್ರದಂತಿದ್ದಾರೆ’ ಎಂದು ಅವರು ಹೇಳಿದ್ದಾರೆ. ರೆಹಮಾನ್ ಮತ್ತು ಸೈರಾ ತಮ್ಮ ವಕೀಲ ವಂದನಾ ಶಾ ಮೂಲಕ ವಿಚ್ಛೇದನವನ್ನು ಘೋಷಿಸಿದರು. ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಡಿವೋರ್ಸ್ ಬಗ್ಗೆ ತಿಳಿಸಿದ್ದರು. ಇಬ್ಬರು ದೂರ ದೂರವಾಗುತ್ತಿರುವ ಸುದ್ದಿ ಕೇಳಿ ಸಾಕಷ್ಟುಮಂದಿ ಬೇಸರ ವ್ಯಕ್ತಪಡಿಸಿದ್ದಾರೆ.