ವಿಜಯಸಾಕ್ಷಿ ಸುದ್ದಿ, ಗದಗ: ಸದೃಢವಾದ ಆರೋಗ್ಯವಿದ್ದರೆ ಸದೃಢವಾದ ಮನಸ್ಸು ಇರುತ್ತದೆ. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮೆದುಳು ಅಭಿವೃದ್ಧಿ ಹೊಂದುತ್ತದೆ. ಕ್ರೀಡೆಗಳು ಸದೃಢ ಆರೋಗ್ಯ ಹೊಂದಲು ಸಹಕಾರಿಯಾಗುವುದಲ್ಲದೇ ಜೀವನದಲ್ಲಿ ಯಶಸ್ಸು ಗಳಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಸವರಾಜ ಹೇಳಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗದಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕ್ರೀಡೆಗಳು ಹಾಗೂ ದೈಹಿಕ ಚಟವಟಿಕೆಗಳಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಆತ್ಮವಿಶ್ವಾಸ ಅಭಿವೃದ್ಧಿಯಾಗುತ್ತದೆ. ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಇತ್ತೀಚೆಗೆ ಶಾಲಾ-ಕಾಲೇಜುಗಳಲ್ಲಿ ವ್ಯಾಯಾಮ, ಯೋಗಾಸನವನ್ನು ಪಠ್ಯಕ್ರಮವನ್ನಾಗಿ ರೂಢಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪೊಲೀಸರು ಇತರೆ ಪ್ರಕರಣಗಳನ್ನು ತನಿಖೆ ಮಾಡಿ ನ್ಯಾಯಾಲಯದಲ್ಲಿ ಸಾಕ್ಷಿದಾರ ಸರಿಯಾಗಿ ಸಾಕ್ಷಿ ಹೇಳದ ಕಾರಣ ಪ್ರಕರಣ ಬಿದ್ದು ಹೋಗುವ ಸಂದರ್ಭವಿರುತ್ತದೆ. ಅಂತಹ ಸಮಯದಲ್ಲಿ ಪ್ರಕರಣಗಳನ್ನು ಕೂಡ ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಬೇಕು. ಪ್ರತಿಯೊಬ್ಬ ನಾಗರಿಕರೂ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಲು ದೈಹಿಕ ಚಟುವಟಿಕೆಗಳು ಬಹಳ ಮುಖ್ಯವಾಗಿದೆ. ಕ್ರೀಡೆಗಳ ಮಹತ್ವ ಮನಗಂಡು 2012ರಿಂದ ರಾಷ್ಟಿçÃಯ ಕ್ರೀಡಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದು ಅವರು ಶುಭ ಹಾರೈಸಿದರು. ಗದಗ ಶಹರ ಹಾಗೂ ವಿಶೇಷ ಘಟಕ, ಗದಗ ಗ್ರಾಮೀಣ ಹಾಗೂ ಮುಳಗುಂದ, ರೋಣ ವೃತ್ತ, ಡಿಎಆರ್ ವೃತ್ತ, ಶಿರಹಟ್ಟಿ ವೃತ್ತ, ಬೆಟಗೇರಿ ವೃತ್ತ, ನರಗುಂದ-ಮುAಡರಗಿ ವೃತ್ತ ಸೇರಿ 7 ತಂಡಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಡಿವೈಎಸ್ಪಿಗಳಾದ ವಿದ್ಯಾನಂದ ನಾಯಕ, ಪ್ರಭುಗೌಡ ಪಾಟೀಲ ಸೇರಿ ಜಿಲ್ಲೆಯ ವಿವಿಧ ವೃತ್ತದ ಸಿಪಿಐ, ಪಿಎಸ್ಐ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು. ಶಂಕರಗೌಡ ಚೌದರಿ ನಿರೂಪಿಸಿದರು.