ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತ್ರಿವಿಧ ದಾಸೋಹ ಸೇವೆಯಲ್ಲಿ ಮಠಮಾನ್ಯಗಳ ಪಾತ್ರ ಅಗ್ರಗಣ್ಯವಾಗಿದೆ. ತುಲಾಭಾರ ಸೇವೆಯಿಂದ ಬರುವ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ವಿನಯೋಗಿಸಲಾಗುತ್ತಿದೆ ಎಂದು ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾಂದಗಳವರು ನುಡಿದರು.
ಅವರು ಗುರುವಾರ ಪಟ್ಟಣದ ವಿದ್ಯಾರಣ್ಯ ವೃತ್ತದ ಹತ್ತಿರ ಲಿಂ.ಶ್ರೀ ರುದ್ರಯ್ಯ ಹಿರೇಮಠ ಇವರ ಸ್ಮರಣಾರ್ಥವಾಗಿ ತುಲಾಭಾರ ಹಾಗೂ ಪಾದಪೂಜಾ ಕಾರ್ಯಕ್ರಮದಲ್ಲಿ ನೀಡಿದ ತುಲಾಭಾರ ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಕಾಶಿ ಪೀಠ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಭಕ್ತರ ತುಲಾಭಾರ ಸೇವೆಯಿಂದ ಬರುವ ಹಣವನ್ನು ತ್ರಿವಿಧ ದಾಸೋಹದ ಜೊತೆಗೆ ಪ್ರತಿ ತಿಂಗಳು ಸುಮಾರು 500 ವಿದ್ಯಾರ್ಥಿಗಳಿಗೆ 1000 ರೂಗಳಂತೆ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ದುಡಿಮೆಯ ಕೊಂಚ ಹಣವನ್ನು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಿಗೆ ನೀಡುವುದರಿಂದ ಅದಕ್ಕೆ ಶ್ರೇಷ್ಠವಾದ ಫಲ ಪ್ರಾಪ್ತಿಯಾಗುತ್ತದೆ ಮತ್ತು ಬದುಕಿನ ಸಾರ್ಥಕತೆಗೆ ಕಾರಣವಾಗುತ್ತದೆ. ಲಿಂ.ರುದ್ರಯ್ಯ ಹಿರೇಮಠ ಅವರ ಸ್ಮರಣಾರ್ಥ ಅವರ ಕುಟುಂಬವರ್ಗದವರು ನೀಡಿದ ತುಲಾಭಾರ ಸೇವೆ ಸದ್ವಿನಿಯೋಗವಾಗುವದರ ಜೊತೆಗೆ ಅವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ದದೇವರಮಠ, ರಾಜೀವ ಕುಂಬಿ, ಶಂಕ್ರಪ್ಪ ಗುರಿಕಾರ, ಶಿವಲೀಲಾ ಹಿರೇಮಠ, ಗಂಗಾಧರ ಹಿರೇಮಠ, ಸುಮಾ ಹಿರೇಮಠ, ಪಂಚಯ್ಯ ಹಿರೇಮಠ, ಚನ್ನಪ್ಪ ಕೋಲಕಾರ, ಮಹೇಶ ಲಿಂಬಯ್ಯ ಸ್ವಾಮಿಮಠ, ಜೆ.ಡಿ. ಲಮಾಣಿ, ಸಂತೋಷ ಬಾಳಿಕಾಯಿ, ಬಿ.ಟಿ. ಪಾಟೀಲ, ಚಂದ್ರು ಹಿರೇಮಠ, ವೀರಣ್ಣ ಪವಾಡದ, ಕುಮಾರ ಕುಂಬಾರ, ಮುರುಘೇಂದ್ರಸ್ವಾಮಿ ಹಿರೇಮಠ ಮುಂತಾದವರಿದ್ದರು. ಶ್ರೀಕಾಂತ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.