ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರಕ್ಕೆ ಉತ್ತಮ ಕ್ರೀಡಾ ಸೌಲಭ್ಯ ದೊರಕಿಸಿದ ಪ್ರೈಮ್ ಸ್ಪೋರ್ಟ್ಸ್ ಪಾರ್ಕ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ನಗರದ ಪಾಲಿಗೆ ಇದೊಂದು ಉತ್ತಮ ಸೌಲಭ್ಯವಾಗಿದೆ. ಹಣ ಎಲ್ಲರಲ್ಲೂ ಇರುತ್ತದೆ. ಆದರೆ, ಉತ್ತಮ ಕಾರ್ಯಗಳಿಗಾಗಿ ಹಣ ಬಳಸುವ ಆಲೋಚನೆ ಎಲ್ಲರಲ್ಲೂ ಬರುವುದಿಲ್ಲ. ಅಂತಹ ಉತ್ತಮ ಕಾರ್ಯಕ್ರಮವನ್ನು ಪ್ರೈಮ್ ಸ್ಪೋರ್ಟ್ಸ್ ಪಾರ್ಕ್ ನಡೆಸಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೆಮ್ಮೆ ವ್ಯಕ್ತಪಡಿಸಿದರು.
ನಗರದ ಕಳಸಾಪೂರ ರಿಂಗ್ ರಸ್ತೆಯಲ್ಲಿ ಶನಿವಾರ ಪ್ರೈಮ್ ಸ್ಪೋರ್ಟ್ಸ್ ಪಾರ್ಕ್ ಸಂಸ್ಥೆಯ ಬಾಕ್ಸ್ ಟರ್ಫ್ ಕ್ರಿಕೆಟ್ ಮತ್ತು ಫುಟ್ಬಾಲ್ ಕ್ರೀಡಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರದಲ್ಲಿ ಎಲ್ಲ ಕ್ರೀಡೆಗಳ ಅಂಗಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಲಾಂಗ್ ಟೆನ್ನಿಸ್ ಕ್ರೀಡೆಗಾಗಿ ಒಂದು ಗ್ರೌಂಡ್ ಅಭಿವೃದ್ಧಿಪಡಿಸಲಾಗುವುದು. ಈ ಬಗ್ಗೆ ಸೂಕ್ತ ಸ್ಥಳದ ಹುಡುಕಾಟ ನಡೆಸಲಾಗುತ್ತಿದೆ. ಗದುಗಿನಲ್ಲಿ ಕ್ರೀಡಾಕ್ಷೇತ್ರಕ್ಕೆ ಪೂರಕವಾಗಿ ಸಾಕಷ್ಟು ಸೌಲಭ್ಯಗಳಿವೆ. ಇಲ್ಲಿ ಕ್ರೀಡಾ ಪ್ರತಿಭೆಗಳಿಗೂ ಕೊರತೆ ಇಲ್ಲ. ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಹಲವು ಕ್ರೀಡಾಪಟುಗಳಿಗೆ ಪ್ರತಿಭೆ ಇದ್ದರೂ ಪ್ರೋತ್ಸಾಹದ ಕೊರತೆ ಇರುತ್ತದೆ. ಶ್ರೀಮಂತ ಸಮಾಜ ಅಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಸ್.ಎಚ್. ಶಿವನಗೌಡರ್, ಕರಿಬಸಪ್ಪ ಹಂಚಿನಾಳ, ಕಿರಣ ಭೂಮಾ, ರೂಪಚಂದ ಪಾಲರೇಚ, ವರ್ಧಮನ ಜೈನ್, ರಾಜು ಗುಡಿಮನಿ, ಅಕ್ಬರ್ ಸಾಬ್ ಬಬರ್ಚಿ, ಅನಿರುದ್ಧ ಜೋಶಿ, ಶಿವಕುಮಾರಗೌಡ ಪಾಟೀಲ, ರಾಜು ಕುರಡಗಿ, ಸಿದ್ದು ಪಾಟೀಲ, ಸದಾಶಿವ ಮದರಿಮಠ, ನಾರಾಯಣ ಕುಡುತರ, ರಾಘವೇಂದ್ರ ಬಾರಡ, ಸಂತೋಷ ಚೆನ್ನಪ್ಪನ್ನವರ ಸೇರಿದಂತೆ ಮುಂತಾದವರು ಇದ್ದರು.