ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಪ್ರದೇಶದ ಸಂಬಲ್ನಲ್ಲಿ ನಡೆದ ಗೋಲಿಬಾರ್ನಲ್ಲಿ ಐವರ ಹತ್ಯೆ ನಡೆಸಿದ ಘಟನೆಯನ್ನು ವಿರೋಧಿಸಿ ಹಾಗೂ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಸೋಮವಾರದಂದು ನಗರದ ಟಿಪ್ಪು ಸುಲ್ತಾನ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಎಸ್ಡಿಪಿಐನಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಎಸ್ಡಿಪಿಐ ಗದಗ ಜಿಲ್ಲಾಧ್ಯಕ್ಷ ಬಿಲಾಲ್ ಗೋಕಾವಿ ಮಾತನಾಡಿ, ದೇಶದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳು ಇರಬಾರದು ಎಂಬ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಸಂಘ ಪರಿವಾರದ ಈ ಆಡಳಿತ ವ್ಯವಸ್ಥೆಗೆ ಪೊಲೀಸ್ ವ್ಯವಸ್ಥೆ ಕೂಡ ಪೂರಕವಾಗಿ ಕೆಲಸ ಮಾಡುತ್ತಿದೆ. ಈ ಅನ್ಯಾಯದ ವಿರುದ್ಧ ರಾಷ್ಟ್ರಾದ್ಯಂತ ಎಸ್ಡಿಪಿಐ ವತಿಯಿಂದ ಹೋರಾಟ ಮಾಡಲಾಗುತ್ತಿದೆ ಎಂದರು.
ಮುಖಂಡರಾದ ಎಂ. ಇಸ್ಮಾಯಿಲ್ಸಾಬ್ ಮಾತನಾಡುತ್ತ, ದೇಶದಲ್ಲಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಪದೆ ಪದೇ ಧಕ್ಕೆ ಉಂಟಾಗುತ್ತಿದ್ದು, ಆಡಳಿತಾರೂಢ ಪಕ್ಷಗಳು ಅಲ್ಪಸಂಖ್ಯಾತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಪಲವಾಗಿವೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಗೇವಾಡಿ, ಉಪಾಧ್ಯಕ್ಷ ಹಿದಾಯತುಲ್ಲಾ ಕಾಗದಗಾರ, ಕಾರ್ಯದರ್ಶಿ ಇರ್ಫಾನ್ ಗುಳಗುಂದಿ, ಗದಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಅಫ್ಫಾನ್ ತರಫ್ದಾರ್, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಪ್ರದಾನ ಕಾರ್ಯದರ್ಶಿ ಅಬ್ದುಲ್ ಕಾಗದಗಾರ್, ಸಯ್ಯದ್ ಮದಾರ, ಅಬ್ದುಲ್ಲಾ ಕೊಟ್ಟೂರ್, ಸಲೀಂ ಅಹ್ಮದ್ ಮಾಳೆಕೊಪ್ಪ, ಸಾದಿಕ್ ದೊಡ್ಡಮನಿ, ಸಾದಿಕ್ ಶಿರಹಟ್ಟಿ, ಮುಸ್ತಾಕ್ ಕಟ್ಟಿಮನಿ, ಹಸ್ಸನ್ ನಾಗನೂರ್, ಸಮೀರ್ ಕೊಟ್ಟೂರು, ಮುಸ್ತಾಕ್ ಹೊಸಮನಿ, ಅನ್ವರ್ ಮುಲ್ಲಾ, ಸಮೀರ್ ಕೊಲ್ಕರ್, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.