ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ನರಸಾಪೂರ ಗ್ರಾಮದ ಖಾದಿ ನಗರದ ಐದು ವರ್ಷದ ಬಾಲಪ್ರತಿಭೆ ಋತ್ವಿಕಾ ಸೋಮೇಶ್ವರ ಬಿದರೂರ 2024ನೇ ಸಾಲಿನ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಯಾಗಿದ್ದಾಳೆ.
ಅತೀ ಚಿಕ್ಕ ವಯಸ್ಸಿನಲ್ಲಿ ನೆಲದ ಮೇಲೆ ಚಿತ್ತಾರದ ರಂಗೋಲಿ ಬಿಡಿಸುವ ಕಲೆ ಹೊಂದಿರುವ ಋತ್ವಿಕಾಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಒಲಿದು ಬಂದಿದೆ. ಚುಕ್ಕಿ ರಂಗೋಲಿಯಲ್ಲಿ ದೀಪ, ಗಣೇಶ, ವಿವಿಧ ಹೂಗಳು ಸೇರಿ 15-20 ವಿವಿಧ ರಂಗೋಲಿಯನ್ನು ಬಿಡಿಸುವ ಈಕೆ ತನ್ನ ತಾಯಿ ಪ್ರಿಯಾ ಅವರಿಂದ ಪ್ರೇರಣೆ ಪಡೆದು ಅತೀ ಚಿಕ್ಕ ವಯಸ್ಸಿನಿಂದಲೇ ರಂಗೋಲಿ ಬಿಡಿಸುವ ಆಸಕ್ತಿ ಹೊಂದಿದ್ದಳು.
ಈ ಹಿನ್ನೆಲೆಯಲ್ಲಿ ಋತ್ವಿಕಾ ತಂದೆ-ತಾಯಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ರಂಗೋಲಿ ಚಿತ್ರ ಬಿಡಿಸುತ್ತಿರುವ ದೃಶ್ಯಾವಳಿಗಳನ್ನು ಕಳುಹಿಸಿದ್ದರು. ದೃಶ್ಯಾವಳಿಗಳನ್ನು ಪರಿಗಣಿಸಿ ಋತ್ವಿಕಾ ಬಿದರೂರಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ನೀಡಿ ಗೌರವಿಸಿದೆ.