ವಿಜಯಸಾಕ್ಷಿ ಸುದ್ದಿ, ಗದಗ: ಬಯಲಾಟದ ಕಲೆಗಳು ಯಕ್ಷಗಾನದಂತೆಯೇ ವಿಶ್ವವಿಖ್ಯಾತಗೊಳ್ಳಲು ಪಠ್ಯ, ನೃತ್ಯ, ಹಾಡುಗಾರಿಕೆಯಲ್ಲಿ ಹಲವು ಬದಲಾವಣೆಗಳನ್ನು ತಂದು ಶಿಸ್ತುಬದ್ಧವಾಗಿ ಪ್ರದರ್ಶನಗೊಂಡರೆ ತನ್ನ ಗತವೈಭವವನ್ನು ಪಡೆಯುವುದರಲ್ಲಿ ಅನುಮಾನವಿಲ್ಲ. ಇಂತಹ ಬದಲಾವಣೆಗಳು ಕಾಲದ ಅಗತ್ಯವೆಂದು ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ್ ತಿಳಿಸಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗವು ಕರ್ನಾಟಕ ಬಯಲಾಟ ಅಕಾಡೆಮಿಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ‘ಬಯಲಾಟ : ಪರಂಪರೆ ಮತ್ತು ಪ್ರಯೋಗ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಜನಪದ ಕಲೆಗಳು ಮನುಷ್ಯನಷ್ಟೇ ಪ್ರಾಚೀನತೆ ಹೊಂದಿದ ವಿಶಿಷ್ಟವಾದ ಕಲೆ. ಸಮಾಜದಲ್ಲಿರುವ ಅಂಕು-ಡೊAಕು ತಿದ್ದುವ ಶಕ್ತಿ ಜನಪದ ಕಲೆಯಲ್ಲಿ ಅಡಗಿದೆ. ಜನಪದ ಕಲೆಗಳು ಮನರಂಜನೆ ಜೊತೆಗೆ ಬುದ್ಧಿಶಕ್ತಿ ಹಾಗೂ ಮಾರ್ಗದರ್ಶನ ನೀಡುವ ಮಾಧ್ಯಮವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡಾಟವನ್ನು ಬಯಲಾಟ, ಅಟ್ಟದಾಟ, ಹಿರೇ ಆಟ ಎಂದು ಕರೆಯುತ್ತಾರೆ. ರಾಜ್ಯದ ೨೦ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ದೊಡ್ಡಾಟದ ಪಾರಂಪರಿಕ ಕಲಾವಿದರು ಇದ್ದಾರೆ. ವಿಭಿನ್ನ ಹೆಸರು ಮತ್ತು ಶೈಲಿಗಳೂ ಇವೆ. ಹಳ್ಳಿ ಜನರು ಆಡುವ ಆಟ ಎಂದು ಈ ಕಲೆ ನಿರ್ಲಕ್ಷö್ಯಕ್ಕೆ ಒಳಗಾಗಿದೆ. ಭರತನ ನಾಟ್ಯಶಾಸ್ತçಕ್ಕೂ ಬಯಲಾಟದ ಕುಣಿತಗಳೇ ಮೂಲವಾಗಿವೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಸಿದ್ದಣ್ಣ ಜಕಬಾಳ ಮಾತನಾಡಿ, ಸೊಂಟ, ಕಂಠ ಗಟ್ಟಿಯಿದ್ದರೆ ಮಾತ್ರ ಬಯಲಾಟ. ದೊಡ್ಡಾಟವನ್ನು ಬಯಲಾಟ ಎಂದೂ ಕರೆಯುತ್ತಾರೆ. ಹಾಡು, ನೃತ್ಯ, ಭಂಗಿ ಮತ್ತು ಮುದ್ರೆಗಳ ಬಳಕೆ ಇರುವ ವಿಶಿಷ್ಟ ದೃಶ್ಯಕಲೆ ಇದು. ಪಾತ್ರಧಾರಿಗಳ ದನಿ ಗಟ್ಟಿಯಾಗಿರಬೇಕು. ಕಲಿಯುವ ಆಸಕ್ತಿ ಇದ್ದರವರು ಯಾರೇ ಬಂದರೂ ಬಯಲಾಟ ಅಕಾಡೆಮಿಯು ಅವರ ಜೊತೆಗಿರುತ್ತದೆ ಎಂದರು.
ಬಯಲಾಟ ಅಕಾಡೆಮಿಯ ಸಂಶೋಧನಾ ಸಹಾಯಕರಾದ ಡಾ. ಅಂದಯ್ಯ ಅರವಟಗಿಮಠ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ೩ ಸಾವಿರಕ್ಕೂ ಹೆಚ್ಚು ಯಕ್ಷಗಾನದ ವೃತ್ತಿಪರ ತಂಡಗಳಿವೆ. ಕರಾವಳಿಯ ಯಕ್ಷಗಾನಕ್ಕೆ ಅಂತಹದೊಂದು ವಿಶ್ವಮಾನ್ಯತೆ ಸಿಗಲು ಕಾರಣರಾದವರು ಶಿವರಾಮ ಕಾರಂತರು ಮತ್ತು ಕರಾವಳಿಯ ಸಮಸ್ತ ವಿದ್ಯಾವಂತರು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಡಾ. ಎ.ಕೆ. ಮಠ, ಇಂದಿನ ಮಕ್ಕಳು ಬಹುತೇಕ ಸಮಯವನ್ನು ಮೊಬೈಲ್ ಫೋನ್ನಲ್ಲಿಯೇ ಕಳೆಯುತ್ತಿದ್ದಾರೆ. ಅವರಿಗೆ ಸಂಗೀತ, ನಾಟಕ, ದೊಡ್ಡಾಟ, ರಂಗ ಗೀತೆ, ವಾದ್ಯಗಳ ಅರಿವೇ ಇಲ್ಲ. ಇಂತಹ ಕಲೆಗಳನ್ನು ಉಳಿಸುವ ಅಗತ್ಯವಿದೆ.
ಅಶೋಕ ಸುತಾರ ಪ್ರಾರ್ಥಿಸಿದರು. ಶಿವರೆಡ್ಡಿ ಅಮರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಬಯಲಾಟ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಡಾ. ರಾಮಚಂದ್ರ ಪಡೇಸೂರು ನಿರೂಪಿಸಿದರು. ಡಾ. ಅಂದಯ್ಯ ಅರವಟಗಿಮಠ ವಂದಿಸಿದರು. ಪ್ರೊ. ಚಂದ್ರಶೇಖರ ವಸ್ತçದ, ಡಾ. ಜಿ.ಬಿ. ಪಾಟೀಲ, ವಿವೇಕಾನಂದಗೌಡ ಪಾಟೀಲ, ಅಶೋಕ ಬಣ್ಣದ ಉಪಸ್ಥಿತರಿದ್ದರು.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಶಂಕ್ರಣ್ಣ ಸಂಕಣ್ಣವರ ಮಾತನಾಡಿ, ಇಂದಿನ ದೃಶ್ಯ ಮಾಧ್ಯಮದ ಭರಾಟೆಯಲ್ಲಿ ಗ್ರಾಮೀಣ ಪ್ರದೇಶದ ದೊಡ್ಡಾಟ, ಬಯಲಾಟದಂತಹ ಕಲೆಗಳು ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಗ್ರಾಮೀಣ ಪ್ರದೇಶದ ಕಲೆಗಳನ್ನು ಇಂದಿನ ಯುವ ಪೀಳಿಗೆಗೆ ಕಲಿಸುವತ್ತ ಕಲಾವಿದರು ಗಮನ ಹರಿಸಬೇಕು. ಇಂದಿನ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದು, ಎಲ್ಲ ಪರಂಪರೆಗಳಿಗೂ ಧಕ್ಕೆ ಬರುತ್ತಿದೆ ಎಂದು ವಿಷಾದಿಸಿದರು.